ADVERTISEMENT

ಬಳ್ಳಾರಿ | ರೈತರ ಕಡೆಗಣಿಸಿದ ಕಾಂಗ್ರೆಸ್‌ ಸರ್ಕಾರ: ಮಾಜಿ ಶಾಸಕ ರಾಜುಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:04 IST
Last Updated 26 ನವೆಂಬರ್ 2025, 5:04 IST
ರಾಜು ಗೌಡ 
ರಾಜು ಗೌಡ    

ಬಳ್ಳಾರಿ: ‘ಅಧಿಕಾರದ ಕಿತ್ತಾಟದಲ್ಲಿ ತೊಡಗಿರುವ ಕಾಂಗ್ರೆಸ್‌ ಸರ್ಕಾರ ರಾಜ್ಯದ ರೈತರನ್ನು ಕಡೆಗಣಿಸಿದೆ. ಅದರಲ್ಲೂ ಉತ್ತರ ಕರ್ನಾಟ, ಕಲ್ಯಾಣ ಕರ್ನಾಟಕ ಭಾಗದ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತಾಳಿದೆ’ ಎಂದು ಮಾಜಿ ಸಚಿವ ರಾಜು ಗೌಡ ಆರೋಪಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ವಿಪರೀತ ಮಳೆಯಿಂದಾಗಿ ವ್ಯಾಪಕ ಬೆಳೆಹಾನಿಯಾಗಿದೆ. ಬೆಳೆ ಪರಿಹಾರಕ್ಕೆ ಅರ್ಜಿಯನ್ನೇ ಹಾಕಬೇಡಿ ಎಂದು ಹಲವು ತಾಲ್ಲೂಕುಗಳಲ್ಲಿ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆ ನೀಡುತ್ತಿದ್ದಾರೆ. ಈ ಮಧ್ಯೆ ಸರ್ಕಾರ ಅಧಿಕಾರ ಕಿತ್ತಾಟವೆಂಬ ‘ರಿಯಾಲಿಟಿ ಶೋ’ ನಡೆಸುತ್ತಾ ಜನರನ್ನು ರಂಜಿಸುತ್ತಿದೆ’ ಎಂದು ಆರೋಪಿಸಿದರು. 

‘ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ನೀಡಿತ್ತು. ಇಂದು ರಾಜ್ಯ ಸರ್ಕಾರ ₹4 ಲಕ್ಷ ಕೋಟಿಗಿಂತಲೂ ಅಧಿಕ ಮೊತ್ತದ ಬಜೆಟ್‌ ಮಂಡಿಸಿದ್ದರೂ, ಸಕಾಲಕ್ಕೆ ಸೂಕ್ತ ಪರಿಹಾರ ನೀಡುತ್ತಿಲ್ಲ’ ಎಂದು ದೂರಿದರು. 

ADVERTISEMENT

‘ಬೆಳಗಾವಿಯಲ್ಲಿ ನಡೆದ ಕಬ್ಬು ಬೆಳೆಗಾರರ ಹೋರಾಟ ನಮಗೆ ಮಾದರಿಯಾಗಬೇಕು. ಅಲ್ಲಿನ ರೈತರ ಕಬ್ಬಿಗೆ ನಿಗದಿ ಮಾಡಲಾದ ಬೆಲೆಯನ್ನು ರಾಜ್ಯದ ಉಳಿದ ರೈತರಿಗೂ ನಿಗದಿ ಮಾಡಬೇಕು. ತುಂಗಭದ್ರಾ ಕೊಳ್ಳದ ಎರಡನೇ ಬೆಳೆಗೆ ನೀರು ಪೂರೈಕೆ ಮಾಡಬೇಕು. ಮೆಕ್ಕೆ ಜೋಳದ ಖರೀದಿ ಕೇಂದ್ರ ಆರಂಭಿಸಬೇಕು ಎಂಬ ವಿಚಾರಗಳನ್ನು ಇಟ್ಟುಕೊಂಡು ಬಿಜೆಪಿ ಪ್ರತಿಭಟನೆಗಳನ್ನು ನಡೆಸಲು ತೀರ್ಮಾನಿಸಿದೆ. ಬುಧವಾರ (ನ. 26)ರಂದು ತುಂಗಭದ್ರಾ ಜಲಾಶಯದ ಬಳಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ನೇತೃತ್ವದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಯಲಿದೆ’ ಎಂದು ಅವರು ತಿಳಿಸಿದರು. 

ಬಳಿಕ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್‌ ಕುಮಾರ್‌ ಮೋಕ, ‘ಇದೇ ವಿಚಾರಗಳನ್ನು ಎತ್ತಿಕೊಂಡು ಇದೇ 28ರಂದು ಬಳ್ಳಾರಿ ನಗರದಲ್ಲೂ ಪ್ರತಿಭಟನೆ ನಡೆಸಲಾಗುವುದು. ಬಳಿಕ ತಾಲ್ಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಲಿದೆ’ ಎಂದು ಹೇಳಿದರು.

ಮಾಜಿ ಶಾಸಕ ಸೋಮಶೇಖರ ರೆಡ್ಡಿ, ರಾಮಲಿಂಗಪ್ಪ, ಹನುಮಂತಪ್ಪ, ಮಹಿಪಾಲ, ಗಣಪಾಲ ಐನಾಥ ರೆಡ್ಡಿ ಮತ್ತಿತರರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.