ADVERTISEMENT

ಜೆಎಸ್‌ಡಬ್ಲ್ಯು ಸ್ಟೀಲ್ಸ್‌ಗೆ ಹೊರ ಗುತ್ತಿಗೆ ನೌಕರರ ಪ್ರವೇಶ ನಿಷೇಧ

ಸಂಡೂರು ತಾಲ್ಲೂಕಿನಲ್ಲಿ ಏರುತ್ತಿರುವ ಕೋವಿಡ್‌ ಸೋಂಕು ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 18:16 IST
Last Updated 10 ಜನವರಿ 2022, 18:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಳ್ಳಾರಿ: ಜೆಎಸ್‌ಡಬ್ಲ್ಯು ಟೌನ್‌ಶಿಪ್‌ ಮತ್ತು ಸುತ್ತಮುತ್ತಲ ಪ್ರದೇಶ ಸೇರಿದಂತೆ ಸಂಡೂರು ತಾಲ್ಲೂಕಿನಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿರುವುದರಿಂದ ಜೆಎಸ್‌ಡಬ್ಲ್ಯು ಕಂಪನಿಗೆ ಹೊರ ರಾಜ್ಯಗಳಿಂದ ಬರುವ ಹೊರ ಗುತ್ತಿಗೆ ಕಾರ್ಮಿಕರ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಸೋಮವಾರ ರಾತ್ರಿ ಆದೇಶ ಹೊರಡಿಸಿದೆ.

ಸಂಡೂರು ತಾಲ್ಲೂಕು ಸೇರಿದಂತೆ ಜಿಲ್ಲೆಯ ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ತಕ್ಷಣದಿಂದಲೇ ಜೆಎಸ್‌ಡಬ್ಲ್ಯು ಆಡಳಿತ ಹೊರ ಗುತ್ತಿಗೆ ಕಾರ್ಮಿಕರ ಪ್ರವೇಶ ನಿಷೇಧಿಸುವಂತೆ ಜಿಲ್ಲಾಧಿಕಾರಿ ಪವನ್‌ ಕುಮಾರ್‌ ಮಾಲಪಾಟಿ ಈ ಆದೇಶದ‌ಲ್ಲಿ ತಿಳಿಸಿದ್ದಾರೆ. ಸೋಂಕು ವ್ಯಾಪಕವಾಗಿ ಹರಡಲು ಹೊರ ರಾಜ್ಯಗಳ ಹೊರ ಗುತ್ತಿಗೆ ಕಾರ್ಮಿಕರೇ ಕಾರಣ ಎಂದೂ ಅವರು ಹೇಳಿದ್ದಾರೆ.

ಸದರಿ ಆದೇಶ ಉಲ್ಲಂಘಿಸಿದರೆ ಜೆಎಸ್‌ಡಬ್ಲ್ಯು ಸ್ಟೀಲ್‌ ಮ್ಯಾನೇಜ್‌ಮೆಂಟ್‌ ಮತ್ತು ಹೊರಗುತ್ತಿಗೆ ನೌಕರರನ್ನು ಕರೆತರುವ ಗುತ್ತಿಗೆದಾರರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಭಾರತ ದಂಡ ಸಂಹಿತೆ ಹಾಗೂ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್‌ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಮಾಲಪಾಟಿ ಸ್ಪಷ್ಟಪಡಿಸಿದ್ದಾರೆ.ತೋರಣಗಲ್ಲು ಸುತ್ತಮುತ್ತ ಒಂದು ವಾರದಲ್ಲಿ ಸುಮಾರು 100 ಕೋವಿಡ್‌ ಸೋಂಕಿತ ಪ್ರಕರಣಗಳು ಕಂಡುಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.