ಹೊಸಪೇಟೆ (ವಿಜಯನಗರ): ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶುಕ್ರವಾರ ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಿಸಲಾಯಿತು.
ಅಣೆಕಟ್ಟೆ ಮೇಲೆ ಗಂಗೆಪೂಜೆ ನೆರವೇರಿಸಿದ ನಂತರ ನದಿಗೆ ಬಾಗಿನ ಅರ್ಪಿಸಿದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್ ಮಾತನಾಡಿ, ತುಂಗಭದ್ರಾ ಜಲಾಶಯ ತುಂಬಿರುವುದರಿಂದ ರೈತರೆಲ್ಲ ಸಂತಸಗೊಂಡಿದ್ದಾರೆ. ಜಲಾಶಯ ನಿರ್ಮಾಣಗೊಂಡ ನಂತರ ಇದೇ ಮೊದಲ ಬಾರಿಗೆ ಅತಿ ಬೇಗ ಮೈದುಂಬಿಕೊಂಡಿದೆ. ಈಗಾಗಲೇ 246 ಟಿ.ಎಂ.ಸಿ. ಅಡಿ ನೀರು ನದಿಗೆ ಹರಿಸಲಾಗಿದೆ ಎಂದರು.
ಕಾಲುವೆ ಹಾಗೂ ನದಿ ನೀರಿನ ಸದ್ಬಳಕೆಯಲ್ಲಿ ಆಂಧ್ರ ಪ್ರದೇಶ ಬಹಳ ಮುಂದಿದೆ. ಅಲ್ಲಿನ ಎಲ್ಲ ಕೆರೆ, ಕಟ್ಟೆಗಳನ್ನು ವ್ಯವಸ್ಥಿತವಾಗಿ ತುಂಬಿಸುತ್ತಾರೆ. ಬೇಸಿಗೆಯಲ್ಲಿ ನೀರಿಗೆ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ, ನಮ್ಮಲ್ಲಿ ಯಾವುದೇ ಯೋಜನೆಗಳಿಲ್ಲ. ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಕೆರೆಗಳನ್ನು ತುಂಬಿಸುವ ಕೆಲಸ ಜನಪ್ರತಿನಿಧಿಗಳು ಮಾಡಬೇಕು. ರಾಯ, ಬೆಲ್ಲ, ಬಸವ ಉಪಕಾಲುವೆಗಳಿಗೆ ಸಮಪರ್ಕವಾಗಿ ನೀರು ಒದಗಿಸಬೇಕು ಎಂದು ಆಗ್ರಹಿಸಿದರು.
ಸಂಘದ ನಗರ ಘಟಕದ ಅಧ್ಯಕ್ಷ ಟಿ.ನಾಗರಾಜ್, ಹೊಸಪೇಟೆ ತಾಲ್ಲೂಕು ಕಾರ್ಯದರ್ಶಿ ಎಚ್.ಜಿ.ಮಲ್ಲಿಕಾರ್ಜುನ, ಕಮಲಾಪುರ ಘಟಕದ ಅಧ್ಯಕ್ಷ ಜೆ.ನಾಗರಾಜ್, ಮುಖಂಡರಾದ ರೇವಣಸಿದ್ದಪ್ಪ, ತಾಯಪ್ಪ, ಗಾಳೆಪ್ಪ, ಸುರೇಶ್, ಜೆ.ಮಲ್ಲಪ್ಪ, ಉದ್ದಾನಯ್ಯ ಸ್ವಾಮಿ, ಅಯ್ಯಣ್ಣ, ಮಹಾಂತೇಶ, ರಾಜಣ್ಣ, ಕೊಟ್ರಪ್ಪ, ಚಿನ್ನಾದೊರೈ, ಜಗನ್, ಮೂರ್ತಿ, ಶ್ರೀನಿವಾಸ, ಎಲ್.ಎಸ್.ರುದ್ರಪ್ಪ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.