ಬಳ್ಳಾರಿ: ದಂಡಿ ಸತ್ಯಾಗ್ರಹಕ್ಕೆ ಹೊರಟ ಮಹಾತ್ಮಾ ಗಾಂಧೀ, ಅವರನ್ನು ಹಿಂಬಾಲಿಸಿದ ನೂರಾರು ಮಂದಿ, ವಿಶ್ರಾಂತ ಭಂಗಿಯಲ್ಲಿರುವ ಗಾಂಧೀ ಸ್ತಬ್ದಚಿತ್ರಗಳು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ನೂರಾರು ವಿದ್ಯಾರ್ಥಿಗಳ ಕುತೂಹಲದ ಕೇಂದ್ರವಾಗಿದ್ದವು.
ಮಹಾತ್ಮಾ ಗಾಂಧೀಜಿಯ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಅವರ ಸಂದೇಶಗಳನ್ನು ರಾಜ್ಯದಾದ್ಯಂತ ಸಾರುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಏರ್ಪಡಿಸಿರುವ ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆ ನಗರಕ್ಕೆ ಬಂದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ರಥದ ಮೇಲ್ಭಾಗದಲ್ಲಿ ಸ್ತಬ್ದಚಿತ್ರಗಳಿದ್ದರೆ. ಸುತ್ತಲೂ ಗಾಂಧೀಜಿ ಜೀವನ ಸಾಧನೆ ಸಾರುವ ಚಿತ್ರಗಳಿದ್ದವು. ಎಲ್ಇಡಿ ಪರದೆಯಲ್ಲಿ ಅವರ ಸಂದೇಶಗಳು ಸಾಲಾಗಿ ಬರುತ್ತಿದ್ದವು. ಅಷ್ಟೇ ಅಲ್ಲ, ಗಾಂಧೀಜಿಗೆ ಪ್ರಿಯವಾದ ಭಜನೆಗಳೂ ಸ್ಪೀಕರ್ ಮೂಲಕ ತೇಲಿ ಬರುತ್ತಿದ್ದವು.
ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್ ಮನೋಹರ್ ಅವರು ಮಹಾತ್ಮರ ಪ್ರತಿಮೆಗೆ ಹೂಮಾಲೆ ಹಾಕಿ ನಮಿಸಿದರು. ಗಾಂಧೀಜಿ ಪರ ಜೈಕಾರ ಕೂಗಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ನಂತರ ರಥವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಂಗಾವತಿ ಕಡೆಗೆ ಸಾಗಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ, ತಹಸೀಲ್ದಾರ್ ನಾಗರಾಜ, ವಿಶ್ವಜೀತ್ ಮೆಹತಾ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಆರೋಗ್ಯಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಪದವಿ ಪೂರ್ವ ಬಾಲಕೀಯರ ಸರ್ಕಾರಿ ಕಾಲೇಜು ಪ್ರಾಂಶುಪಾಲ ಮಹಾಲಿಂಗನಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.