ಹೊಸಪೇಟೆ: ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮಂಗಳವಾರ ಸಂಜೆ ಬಿರುಸಿನ ಮಳೆಯಾಗಿದೆ.
ಸಂಜೆ ಏಳು ಗಂಟೆಗೆ ಆರಂಭಗೊಂಡ ಬಿರುಸಿನ ಮಳೆ ರಾತ್ರಿ ಎಂಟು ಗಂಟೆಯ ವರೆಗೆ ಸುರಿಯಿತು. ಬಳಿಕ ಜಿಟಿಜಿಟಿಯಾಗಿ ರಾತ್ರಿವರೆಗೆ ಮುಂದುವರಿದಿತ್ತು.
ಬೆಳಿಗ್ಗೆಯಿಂದ ಸಂಜೆಯ ವರೆಗೆ ನೆತ್ತಿ ಸುಡುವ ಬಿಸಿಲಿತ್ತು. ಸಂಜೆ ಆರು ಗಂಟೆಯ ನಂತರ ಏಕಾಏಕಿ ದಟ್ಟ ಕಾರ್ಮೋಡ ಬಂದು, ಬಳಿಕ ವರ್ಷಧಾರೆಯಾಯಿತು. ಒಂದು ಗಂಟೆ ಸುರಿದ ಬಿರುಸಿನ ಮಳೆಗೆ ನಗರದ ಕಾಲೇಜು ರಸ್ತೆ, ಚಿತ್ತವಾಡ್ಗಿ, ಬಸವೇಶ್ವರ ಬಡಾವಣೆ, ಹಂಪಿ ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿತ್ತು. ವಾಹನ ಸಂಚಾರ ನಿಧಾನಗೊಂಡಿತ್ತು. ಇದೇ ವೇಳೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ಎಲ್ಲೆಡೆ ಅಂಧಕಾರ ಇತ್ತು.
ತಾಲ್ಲೂಕಿನ ಹಂಪಿ, ಕಡ್ಡಿರಾಂಪುರ, ಕೊಂಡನಾಯಕನಹಳ್ಳಿ, ಸಂಕ್ಲಾಪುರ, ನಾಗೇನಹಳ್ಳಿ, ಹೊಸೂರು ಸೇರಿದಂತೆ ಹಲವೆಡೆ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.