ADVERTISEMENT

ಹೊಸಪೇಟೆ: 22 ಕೆರೆ ತುಂಬಿಸುವ ಯೋಜನೆಗೆ ಸಿ.ಎಂ. ಚಾಲನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 15:40 IST
Last Updated 26 ನವೆಂಬರ್ 2020, 15:40 IST
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬೆಂಗಳೂರಿನಿಂದ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ದೃಶ್ಯವನ್ನು ಜನ ಬೃಹತ್‌ ಎಲ್‌ಇಡಿ ಪರದೆ ಮೇಲೆ ವೀಕ್ಷಿಸಿದರು
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬೆಂಗಳೂರಿನಿಂದ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ದೃಶ್ಯವನ್ನು ಜನ ಬೃಹತ್‌ ಎಲ್‌ಇಡಿ ಪರದೆ ಮೇಲೆ ವೀಕ್ಷಿಸಿದರು   

ಪಾಪಿನಾಯಕನಹಳ್ಳಿ (ಹೊಸಪೇಟೆ ತಾಲ್ಲೂಕು): ತಾಲ್ಲೂಕಿನ ಹತ್ತು ಗ್ರಾಮಗಳ ವ್ಯಾಪ್ತಿಗೆ ಬರುವ 22 ಕೆರೆಗಳಿಗೆ ನೀರು ತುಂಬಿಸುವ ₹243.35 ಕೋಟಿ ಮೊತ್ತದ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗುರುವಾರ ಸಂಜೆ ವರ್ಚುವಲ್‌ ಉದ್ಘಾಟನೆ ನೆರವೇರಿಸಿದರು.

ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಿಂದ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಯಡಿಯೂರಪ್ಪ, ‘ತುಂಗಭದ್ರಾ ನದಿ ಮೂಲಕ 22 ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತರುವುದಾಗಿ ವಿಜಯನಗರ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಭರವಸೆ ಕೊಟ್ಟಿದ್ದೆ. ಕೊಟ್ಟ ಮಾತಿನಂತೆ ಯೋಜನೆ ಅನುಷ್ಠಾನಕ್ಕೆ ತರುತ್ತಿದ್ದೇನೆ’ ಎಂದು ಹೇಳಿದರು.
‘ಕೋವಿಡ್‌ ಸಂಕಷ್ಟದ ನಡುವೆಯೂ ಸರ್ಕಾರ ಅಭಿವೃದ್ಧಿ ಕುಂಠಿತವಾಗದಂತೆ ಕೆಲಸ ಮಾಡುತ್ತಿದೆ. ಈ ನಾಡಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ. ಆದ್ಯತೆ ಮೇರೆಗೆ ನೀರಾವರಿ ಸೌಲಭ್ಯಗಳನ್ನು ಜಾರಿಗೆ ತರಲಾಗುತ್ತಿದೆ’ ಎಂದು ತಿಳಿಸಿದರು.

‘ಹೊಸಪೇಟೆ ತಾಲ್ಲೂಕಿನ ಪಾಪಿನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಗಣಿಗಾರಿಕೆಯಿಂದ ಬಾಧಿತವಾಗಿವೆ. ಅಭಿವೃದ್ಧಿಯಲ್ಲೂ ಅತಿ ಹಿಂದುಳಿದಿವೆ. ಈ ಭಾಗದ ಕೆರೆಗಳನ್ನು ತುಂಬಿಸಿ, ಅಂತರ್ಜಲ ವೃದ್ಧಿಸಲು ಈ ನೀರಾವರಿ ಯೋಜನೆ ಸಹಾಯಕವಾಗಲಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.