ಬಳ್ಳಾರಿ: ಜಿಂದಾಲ್ ಕಾರ್ಖಾನೆಯ ಉಕ್ಕು ಉತ್ಪಾದನೆ ಘಟಕದ ಉಪ ಉತ್ಪನ್ನಗಳಾದ ವಿವಿಧ ಅನಿಲ ಘಟಕಗಳು ಅಪಾಯಕಾರಿಯಾಗಿದ್ದು ಜನವಸತಿ ಇಲ್ಲದ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಕುಡುತಿನಿ ಶ್ರೀನಿವಾಸ್ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಕಾರ್ಖಾನೆಯಲ್ಲಿ ಉಕ್ಕು ಉತ್ಪಾದಿಸುವ ಘಟಕಗಳಲ್ಲಿ ಉತ್ಪತ್ತಿಯಾಗುವ ಕೊರೆಕ್ಸ್ ಅನಿಲ, ಬ್ಲಾಸ್ಟ್ ಫರ್ ನಿಸ್, ಕೊಕೊವನ್ ಅನಿಲಗಳು ವಿಷಕಾರಿಯಾಗಿದ್ದು, ಸೋರಿಕೆಯದರೆ ಮಾನವ ಜೀವಕ್ಕೆ ಕುತ್ತು ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸುರಕ್ಷತೆ ಕೊರತೆ ಹಾಗೂ ನಿರ್ಲಕ್ಷ್ಯದಿಂದ ವಿಷಾನೀಲ ಸೋರಿಕೆಯಾಗುತ್ತದೆ. ಆದ್ದರಿಂದ ಜನ ವಾಸವಿಲ್ಲದ ಪ್ರದೇಶಗಳಲ್ಲಿ ಈ ಘಟಕಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ಈಚೆಗೆ ವಿಶಾಖಪಟ್ಟಣಂನಲ್ಲಿ ನಡೆದ ಅನಿಲ ಸೋರಿಕೆಯಿಂದ ದೊಡ್ಡ ಅನಾಹುತ ಸಂಭವಿಸಿತು. ಈ ಅಂಶವನ್ನು ಗಮನದಲ್ಲಿರಿಸಿಕೊಂಡೇ ಜಿಂದಾಲ್ ಅನಿಲ ಘಟಕಗಳನ್ನು ಸ್ಥಳಾಂತರಿಸಬೇಕು ಎಂದು ಕೋರಿ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗುವುದು ಎಂದರು.
ಅನಿಲ ಘಟಕಗಳ ಅಪಾಯ ಸಾಧ್ಯತೆ ಬಗ್ಗೆ ಜನಪ್ರತಿನಿಧಿಗಳೂ ನಿರಾಸಕ್ತಿ ತಾಳಿದ್ದಾರೆ. ಜಿಂದಾಲ್ ನಲ್ಲಿ ಉದ್ಯೋಗ ಕೊಡುವುದರ ಜೊತೆಗೆ ಉದ್ಯೋಗಿಗಳ ಜೀವ ರಕ್ಷಣೆಯೂ ಮುಖ್ಯ ಎಂದು ಪ್ರತಿಪಾದಿಸಿದರು.
ಮುಖಂಡರಾದ ಟಪಾಲ್ ಗಣೇಶ್, ಮೋಹನ್ ಕುಮಾರ್, ರಾಮು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.