
ಕುಡತಿನಿ (ಸಂಡೂರು): ‘ಕಮ್ಮ ಸಮುದಾಯದ ಜನರು ಶ್ರಮಜೀವಿಗಳಾಗಿದ್ದು, ಭೂಮಿತಾಯಿ ನಂಬಿ ಹಗಲಿರುಳು ಶ್ರಮವಹಿಸಿ ವ್ಯವಸಾಯ ಮಾಡುವ ಮೂಲಕ ಶ್ರೇಷ್ಠ ಜೀವನ ಸಾಗಿಸುತ್ತಿದ್ದಾರೆ’ ಎಂದು ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಹೇಳಿದರು.
ಪಟ್ಟಣದ ಕುರುಗೋಡು ರಸ್ತೆಯಲ್ಲಿ ಕಮ್ಮ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ₹5.5ಕೋಟಿ ವೆಚ್ಚದ ಕಮ್ಮ ಭವನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ, ಕಾರ್ತೀಕ ಮಾಸದ ವನ ಭೋಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ನಮ್ಮ ನೆಲ, ಜಲ, ಭಾಷೆಯನ್ನು ಮರೆಯಬಾರದು. ರಾಜ್ಯದ ಪ್ರತಿಯೊಬ್ಬರೂ ಕನ್ನಡಾಂಬೆಯ ಋಣ ತೀರಿಸಬೇಕು. ನಮ್ಮ ಭಾಷೆ, ಉಸಿರು ಕನ್ನಡ ಆಗಿರಬೇಕು. ಕಮ್ಮ ಭವನ ನಿರ್ಮಾಣಕ್ಕೆ ನನ್ನ ಸಹಕಾರವೂ ಇದ್ದು, ಇದು ಸಾಂಸ್ಕೃತಿಕ ಕಟ್ಟಡವಾಗಲಿ’ ಎಂದರು.
ಕುಡತಿನಿ ಸೇರಿದಂತೆ ಸುತ್ತಲಿನ ಎಲ್ಲ ಗ್ರಾಮಗಳ ಕಮ್ಮ ಸಮಾಜದ ಜನರು ತಮ್ಮ ಕುಟುಂಬದ ಸದಸ್ಯರೊಂದಿಗೆ ವನ ಭೋಜನ ಸವಿದರು.
ಕಮ್ಮ ಸಂಘದ ಗೌರವಾಧ್ಯಕ್ಷ ವೆಂಕಟರಮಣಪ್ಪ, ಉಪಾಧ್ಯಕ್ಷ ಮುಲ್ಲಂಗಿ ಆದೆಪ್ಪ, ಕಾರ್ಯದರ್ಶಿ ಹೆರೇಂದ್ರ ಪ್ರಸಾದ್, ವಿ. ರಾಜಶೇಖರ್, ಸುಜಾತ ಸತ್ಯಪ್ಪ, ಮುಖಂಡರಾದ ಮುಲ್ಲಂಗಿ ರವಿಂದ್ರಬಾಬು, ನಂದೀಶ್, ಕೋನಂಕಿ ರಾಮಪ್ಪ, ವಿಕ್ಕಿ, ಸುಧೀರ್, ರಾಜೇಶ್ವರಿ ಇದ್ದರು.
‘ಭವನಕ್ಕೆ ₹1 ಕೋಟಿ ಅನುದಾನ’
‘ಕಮ್ಮ ಸಮುದಾಯದವರು ಹೃದಯ ಶ್ರೀಮಂತಿಕೆ ಉಳ್ಳವರು. ಕ್ಷೇತ್ರದಲ್ಲಿನ ಕಮ್ಮ ಸಮುದಾಯದವರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕಮ್ಮ ಭವನ ನಿರ್ಮಾಣಕ್ಕೆ ₹1 ಕೋಟಿ ಅನುದಾನ ನೀಡಲಾಗುವುದು. ಈ ಭವನವು ಮಹಿಳಾ ಶಕ್ತಿ ಕೇಂದ್ರವಾಗುವುದರ ಜೊತೆಗೆ ಸಾಮಾಜಿಕ ಶೈಕ್ಷಣಿಕ ಕೌಶಲ ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಬೇಕು’ ಎಂದು ಶಾಸಕಿ ಅನ್ನಪೂರ್ಣ ತುಕಾರಾಂ ಆಶಿಸಿದರು.
ರಾಜ್ಯದಲ್ಲಿ ಕಮ್ಮ ಸಮುದಾಯದ ಸುಮಾರು 40 ಲಕ್ಷ ಜನರಿದ್ದು ಅವರ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಪ್ರತ್ಯೇಕ ನಿಗಮವನ್ನು ಶೀಘ್ರ ಸ್ಥಾಪಿಸಬೇಕು–ವಿ. ರಾಮು ಕಮ್ಮ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.