ಬಳ್ಳಾರಿ: ‘ಚಾಲಕರ ಕರ್ತವ್ಯವು ಅತ್ಯಂತ ಕಠಿಣವಾದ್ದು. ಹಗಲು-ರಾತ್ರಿ ಎನ್ನದೇ ಕುಟುಂಬದಿಂದ ದೂರ ಉಳಿಯುವ ಅವರದ್ದು ಅತ್ಯಂತ ನಿಸ್ವಾರ್ಥ ಸೇವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಹ್ಯಾರಿಸ್ ಸುಮೇರ್ ಹೇಳಿದರು.
ಅಪಘಾತ ಮತ್ತು ಅಪರಾಧ ರಹಿತವಾಗಿ ಐದು ವರ್ಷ ಸೇವೆ ಸಲ್ಲಿಸಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲಕರಿಗೆ ಬಳ್ಳಾರಿ ವಿಭಾಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸುರಕ್ಷಾ ಚಾಲಕ’ ಬೆಳ್ಳಿ ಪದಕ, ನಗದು ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಚಾಲಕರ ಸೇವೆಯನ್ನು ಹೊಗಳಿದರೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಶ್ರೀನಿವಾಸಗಿರಿ ಸಂಚಾರ ಸುರಕ್ಷತೆಯ ಕುರಿತು ತಿಳಿಸಿಕೊಟ್ಟರು. ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ ಬಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಗಮ ನಡೆದು ಬಂದ ಹಾದಿಯ ಬಗ್ಗೆ ವಿಭಾಗೀಯ ಸಂಚಾರಿ ಅಧಿಕಾರಿ ಬಿ.ಚಾಮರಾಜ ವಿವರಿಸಿದರು.
ಘಟಕದ ವ್ಯವಸ್ಥಾಪಕ ಪಿ.ಶಿವಪ್ರಕಾಶ, ವಿಭಾಗೀಯ ಕಾರ್ಯ ಅಧೀಕ್ಷಕರು, ಕಚೇರಿ ಸಿಬ್ಬಂದಿ, ಚಾಲಕರು, ತಾಂತ್ರಿಕ ಸಿಬ್ಬಂದಿಗಳು ಹಾಗೂ ಇತರರು ಇದ್ದರು.
ಪ್ರಶಸ್ತಿ ಪುರಸ್ಕೃತರು: ಕಳಕಪ್ಪ ಗೌಡ, ಪ್ರಸಾದ್ ಬಾಬು, ರೇಣುಕಾಚಾರಿ, ಶಿವಾರೆಡ್ಡಿ, ಮಜೀದ್, ಸಿದ್ದಪ್ಪ, ಶಂಕರಗೌಡ, ಶಾಂತ ಕುಮಾರ್, ರುದ್ರಪ್ಪ ಅವರಿಗೆ ಸುರಕ್ಷಾ ಚಾಲಕ ಪ್ರಶಸ್ತಿ ನೀಡಲಾಯಿತು.
ಹಿರಿಯ ಚಾಲಕರಾಗಿ ಬಡ್ತಿ ಪಡೆದ ಡಿ.ಎಡ್ವಾರ್ಡ್ ಕುಮಾರ್, ವಲಿಭಾಷಾ, ಜೆ.ಹುಸೇನ್ ಸಾಬ್, ಕೃಷ್ಣನಾಯಕ, ರಾಮಾಂಜಿನಿ, ಎಸ್.ವಿಶ್ವನಾಥ, ಕೆ.ಠಾಕೂರ್ ನಾಯ್ಕ, ಲಕ್ಷ್ಮಣ್ ಮೊದಲಿಯರ್ ಮತ್ತು ಸಂಡೂರು ಘಟಕದ ಸಿ.ರುದ್ರಪ್ಪ ಅವರಿಗೆ ಆದೇಶ ಪತ್ರ ನೀಡಲಾಯಿತು.
2024-25 ನೇ ಸಾಲಿನಲ್ಲಿ ಉತ್ತಮ ಸೇವೆ ಸಲ್ಲಿಸಿದ ಸೋಮಶೇಖರ್ ರೆಡ್ಡಿ, ಯುವರಾಜ ನಾಯ್ಕ, ಸಂತೋಷ್, ಪ್ರಕಾಶ್ ಪರಸಪ್ಪನವರ್, ನವೀನ್ ಕುಮಾರ್, ವೀರೇಶ್, ಗೋಪಾಲ ಕೃಷ್ಣ ಅವರನ್ನು ಗೌರವಿಸಲಾಯಿತು.
2022ರಿಂದ 2025ರ ವರೆಗಿನ ಮೂರು ವರ್ಷಗಳ ಅವಧಿಯಲ್ಲಿ ಸರಾಸರಿ 343 ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ ನಿರ್ವಾಹಕ ನೇಮಿನಾಥ ಅವರಿಗೂ ಪ್ರಶಸ್ತಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.