ADVERTISEMENT

ಕೂಡ್ಲಿಗಿ | ಬಸ್ ಪಲ್ಟಿ; 31 ವಿದ್ಯಾರ್ಥಿಗಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 1:51 IST
Last Updated 5 ಫೆಬ್ರುವರಿ 2026, 1:51 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೂಡ್ಲಿಗಿ: ತಾಲ್ಲೂಕಿನ ಅಮ್ಮನಕೇರಿ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಬುಧವಾರ ಬೆಳಿಗ್ಗೆ ಕೇರಳದ ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿಯಾಗಿ ಪ್ರೊಫೆಸರ್ ಸೇರಿದಂತೆ 5 ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದು, 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ತ್ರಿಶೂರ್ ಜಿಲ್ಲೆಯ ಗುರುವಯೂರಿನ ಶ್ರೀಕೃಷ್ಣ ಕಾಲೇಜಿನ ಒಬ್ಬ ಪ್ರೊಫೆಸರ್ ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿಯ 10 ವಿದ್ಯಾರ್ಥಿಗಳು ಹಾಗೂ 21 ವಿದ್ಯಾರ್ಥಿನಿಯರು ಹಂಪಿ, ದಾಂಡೇಲಿ, ಗೋಕರ್ಣ ಪ್ರವಾಸಕ್ಕೆ ಕೈಗೊಂಡಿದ್ದರು. ಅವರೆಲ್ಲ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಗುರುವಾಯೂರಿನಿಂದ ರೈಲಿನಲ್ಲಿ ಹೊರಟು ಮಂಗಳೂರಿಗೆ ಬಂದಿದ್ದರು. ಅಲ್ಲಿಂದ ಸಂಜೆ 6ಕ್ಕೆ ಬಸ್‌ನಲ್ಲಿ ಹಂಪಿಯತ್ತ ಹೊರಟಿದ್ದರು.

ADVERTISEMENT

ಬುಧವಾರ ಬೆಳಿಗ್ಗೆ 5 ಗಂಟೆ ವೇಳೆಗೆ ಚಾಲಕನ ನಿಯಂತ್ರಣ  ತಪ್ಪಿ ಬಸ್‌ ಉರುಳಿ ಬಿತ್ತು. ಘಟನೆಯಲ್ಲಿ ಪ್ರೊಫೆಸರ್‌ ಲಕ್ಷ್ಮಿ ಅವರ ಕಾಲಿಗೆ ಬಲವಾಗಿ ಏಟು ಬಿದ್ದಿದ್ದು, ಅತುಲ್ಯ, ಅವನಿ, ಅತುಲ್‌, ಅಜಯ್‌ ರಾಜ್‌, ಅನುಗ್ರಹ ಅವರಿಗೆ ಗಂಭೀರ ಗಾಯವಾಗಿದೆ. ಅವರಿಗೆ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್‌ಗೆ ಕರೆದೊಯ್ಯಲಾಯಿತು.

ಬೆಳಿಗ್ಗೆ ವಾಯು ವಿಹಾರಕ್ಕೆ ಬಂದಿದ್ದ ಸ್ಥಳೀಯ ಮುಖಂಡರಾದ ಟಿ.ಜಿ.ಮಲ್ಲಿಕಾರ್ಜುನ ಗೌಡ ಹಾಗೂ ಉದಯ ಜನ್ನು ಅವರು ವಿಷಯ ತಿಳಿದು ಆಸ್ಪತ್ರೆಗೆ ಬಂದು ವಿದ್ಯಾರ್ಥಿಗಳಿಗೆ ನೀರು, ಉಪಾಹಾರದ ವ್ಯವಸ್ಥೆ ಮಾಡಿದರು. 

ಕಮಲಾಪುರದ ಟ್ರಾವೆಲ್ಸ್‌ ಏಜೆನ್ಸಿಯೊಂದು ಈ ಪ್ಯಾಕೇಜ್‌ ಪ್ರವಾಸದ ವ್ಯವಸ್ಥೆ ಮಾಡಿತ್ತು. ವಿದ್ಯಾರ್ಥಿಗಳನ್ನು ಮತ್ತೆ ಅವರ ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.