ADVERTISEMENT

ಹೊಸಪೇಟೆಯಲ್ಲಿ ರಾತ್ರಿಯಿಡಿ ಬಿರುಸಿನ ಮಳೆ; ಮನೆಗಳಿಗೆ ನುಗ್ಗಿದ ನೀರು

82 ಮಿ.ಮೀ ವರ್ಷಧಾರೆ, 80 ಗುಡಿಸಲಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 7:40 IST
Last Updated 25 ಜುಲೈ 2020, 7:40 IST
ಮನೆಯೊಳಗೆ ನೀರು ನುಗ್ಗಿರುವ ದೃಶ್ಯ
ಮನೆಯೊಳಗೆ ನೀರು ನುಗ್ಗಿರುವ ದೃಶ್ಯ   
""

ಹೊಸಪೇಟೆ: ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಶುಕ್ರವಾರ ರಾತ್ರಿಯಿಡಿ ಬಿರುಸಿನ ಮಳೆಯಾಗಿದೆ. ಸಂಜೆ ಎಂಟು ಗಂಟೆಗೆ ಆರಂಭಗೊಂಡ ಮಳೆ ಶನಿವಾರ ನಸುಕಿನ ಜಾವದ ವರೆಗೆ ಸತತವಾಗಿ ಸುರಿದಿದೆ. 82 ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ.

ಭಾರಿ ಮಳೆಯಿಂದ ನಗರದ ಬಹುತೇಕ ಚರಂಡಿಗಳು ಉಕ್ಕಿ ಹರಿದಿವೆ. ಹಳ್ಳ, ಕೊಳ್ಳಗಳು ಭರ್ತಿಯಾಗಿವೆ. ನಗರ ಹೊರವಲಯದ ಜಂಬುನಾಥಹಳ್ಳಿಗುಡ್ಡ ಹಳ್ಳದ ನೀರು ನಗರದ ಅಲೆಮಾರಿ ಬುಡ್ಗ ಜಂಗಮ ಕಾಲೊನಿ, ಆಜಾದ್‌ ನಗರ, ಶಾದಿ ಮಹಲ್‌ ಪ್ರದೇಶಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿದೆ.

ಮಳೆ ನೀರು ರಭಸವಾಗಿ ಹರಿದು ಬಂದದ್ದರಿಂದ ಅಲೆಮಾರಿಗಳ ಟೆಂಟ್‌ಗಳು, ಗುಡಿಸಲು ಕಿತ್ತು ಹೋಗಿವೆ. ದವಸ ಧಾನ್ಯ, ಬಟ್ಟೆ ಸೇರಿದಂತೆ ಇತರೆ ವಸ್ತುಗಳು ನೀರಿನಲ್ಲಿ ತೊಯ್ದಿವೆ. ಒಟ್ಟು 80 ಗುಡಿಸಲುಗಳಿಗೆ ಹಾನಿಯಾಗಿದೆ. ಮಾರೆಮ್ಮ ದೇವಸ್ಥಾನಕ್ಕೂ ನೀರು ನುಗ್ಗಿದೆ.

ADVERTISEMENT

ಆಜಾದ್‌ ನಗರದಿಂದ ಅಲೆಮಾರಿ ಕಾಲೊನಿ ವರೆಗಿನ ಮುಖ್ಯರಸ್ತೆ, ಬಡಾವಣೆಯಲ್ಲಿ ಎರಡರಿಂದ ಮೂರು ಅಡಿ ನೀರು ಸಂಗ್ರಹಗೊಂಡಿದ್ದು, ಜನ ಓಡಾಡಲು ಸಮಸ್ಯೆಯಾಗಿದೆ. ಪಟೇಲ್‌ ನಗರದ ವೇಣುಗೋಪಾಲ ದೇವಸ್ಥಾನಕ್ಕೂ ನೀರು ನುಗ್ಗಿದೆ.
ಬಸವೇಶ್ವರ ಬಡಾವಣೆ, ಚಪ್ಪರದಹಳ್ಳಿ, ಚಿತ್ತವಾಡ್ಗಿ, ಪಟೇಲ್‌ ನಗರ ಸೇರಿದಂತೆ ಹಲವೆಡೆ ಚರಂಡಿಗಳು ಉಕ್ಕಿ ಹರಿದು, ಹೊಲಸು ರಸ್ತೆ ಮೇಲೆ ಹರಿದಾಡಿದೆ.

‘ಬಡಾವಣೆಯಲ್ಲಿ ಚರಂಡಿಗಳನ್ನು ನಿರ್ಮಿಸಿಲ್ಲ. ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲ. ಹಳ್ಳದ ನೀರು ಬಂದು ಗುಡಿಸಲುಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಇಷ್ಟಾದರೂ ಇದುವರೆಗೆ ಯಾವೊಬ್ಬ ಜನಪ್ರತಿನಿಧಿ, ಅಧಿಕಾರಿ ಭೇಟಿ ಮಾಡಿಲ್ಲ’ ಎಂದು ಅಲೆಮಾರಿ ಗುಡಾರ ಗುಡಿಸಲು ನಿವಾಸಿಗಳ ಕಲ್ಯಾಣ ಸಂಘದ ಜಿಲ್ಲಾ ಅಧ್ಯಕ್ಷ ಸಣ್ಣ ಮಾರೆಪ್ಪ ಹೇಳಿದ್ದಾರೆ.

ತಾಲ್ಲೂಕಿನ ಹಂಪಿ, ಚಿನ್ನಾಪುರ, ನಲ್ಲಾಪುರ, ಹೊಸೂರು, ಬೈಲುವದ್ದಿಗೇರಿ, ಧರ್ಮಸಾಗರ, ವಡ್ಡರಹಳ್ಳಿ, ಸಂಕ್ಲಾಪುರ, ಕಾರಿಗನೂರು, ವ್ಯಾಸನಕೆರೆ, ಬಸವನದುರ್ಗ, ನಾಗೇನಹಳ್ಳಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.

ಬಿತ್ತನೆ ಮತ್ತಷ್ಟು ಚುರುಕು
ನಾಲ್ಕೈದು ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವ ಕಾರಣ ಹೊಸಪೇಟೆ ಸುತ್ತಮುತ್ತಲಿನ ಭಾಗಗಳಲ್ಲಿ ಬಿತ್ತನೆ ಕಾರ್ಯ ಮತ್ತಷ್ಟು ಚುರುಕು ಪಡೆದಿದೆ. ಜೂನ್‌ನಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಿರಲಿಲ್ಲ. ಆದರೆ, ಜುಲೈನಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಕಾರಣ ರೈತರು ಸಂತಸಗೊಂಡಿದ್ದಾರೆ. ಶನಿವಾರದಿಂದ ತುಂಗಭದ್ರಾ ಜಲಾಶಯದ ಕಾಲುವೆಗಳಿಗೂ ನೀರು ಹರಿಯಲಿದ್ದು, ಭತ್ತ ನಾಟಿ ಚುರುಕು ಪಡೆದುಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.