ಕುರುಗೋಡು: ತಾಲ್ಲೂಕಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಸಿಬ್ಬಂದಿ ಕೊರತೆ ಪರಿಣಾಮ ನಲುಗಿದೆ.
ಆಸ್ಪತ್ರೆಯಲ್ಲಿ ಕಾಯಂ ವೈದ್ಯರೂ ಸೇರಿದಂತೆ ಪಶು ಸಹಾಯಕರು ಮತ್ತು ಸಿಬ್ಬಂದಿ ಇಲ್ಲದ ಪರಿಣಾಮ ಜಾನುವಾರುಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ರೈತರು ಆರೋಪಿಸುತ್ತಾರೆ.
ಪಶು ಆಸ್ಪತ್ರೆ ಬಾಗಿಲು ತೆರೆದರೂ ವೈದ್ಯರಿಗಾಗಿ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಕೆಲವು ಸಮಯದಲ್ಲಿ ಸಂಜೆ ವರೆಗೆ ಕಾದು ಸೇವೆ ದೊರೆಯದೆ ಜಾನುವಾರುಗಳನ್ನು ಮನೆಗೆ ಕರೆದುಕೊಂಡು ಹೋದ ಪ್ರಸಂಗಗಳು ಜರುಗಿವೆ. ಮೂಕ ಪ್ರಾಣಿಗಳ ಜೀವ ಉಳಿಸಲು ಸಿಬ್ಬಂದಿ ನೇಮಿಸುವಂತೆ ಜನಪ್ರತಿನಿಧಿಗಳು ಮತ್ತು ಮೇಲಧಿಕಾರಿಗಳಲ್ಲಿ ಮನವಿಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಸಿದ್ದಪ್ಪ ಅಳಲು ತೋಡಿಕೊಂಡರು.
ತಾಲ್ಲೂಕಿನಲ್ಲಿ 17,350 ಜಾನುವಾರು ಮತ್ತು 81,320 ಕುರಿಗಳಿವೆ. ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ನೇಮಕಗೊಂಡಿಲ್ಲ.
ಕಳೆದ ವರ್ಷ ಕಂಡುಬಂದ ಚರ್ಮಗಂಟು ಬೇನೆಗೆ ಜಾನುವಾರುಗಳು ಮತ್ತು ನೀಲಿನಾಲಿಗೆ ರೋಗಕ್ಕೆ ಕುರಿಗಳು ಮೃತಪಟ್ಟಿದ್ದವು.
‘ಸಿಬ್ಬಂದಿ ಕೊರತೆಯಿಂದ ಚಿಕಿತ್ಸೆ ದೊರೆಯದೆ ಮೃತಪಟ್ಟ ಪರಿಣಾಮ ಜಾನುವಾರು ಮತ್ತು ಕುರಿ ಸಾಕಾಣಿಕೆದಾರರು ನಷ್ಟ ಎದುರಿಸಬೇಕಾಯಿತು. ಮೂಕ ಪ್ರಾಣಿಗಳ ಸಾವು ನೋವು ಹೆಚ್ಚಾಗುವ ಮೊದಲು ಸಿಬ್ಬಂದಿಯನ್ನು ನೇಮಿಸಬೇಕು’ ಎಂಬುದು ರೈತ ಗೋವಿಂದ ಅವರ ಆಗ್ರಹ.
ಪಟ್ಟಣದಲ್ಲಿ ಪಶು ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ಗೆಣಿಕೆಹಾಳು, ಸಿದ್ದಮ್ಮನಹಳ್ಳಿ ಮತ್ತು ಕೋಳೂರು ಗ್ರಾಮಗಳಲ್ಲಿ ಪಶು ಚಿಕಿತ್ಸಾಲಯಗಳಿವೆ.
ಇಲಾಖೆಯ ನಿಮದ ಪ್ರಕಾರ ತಾಲ್ಲೂಕಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯಲ್ಲಿ ಒಬ್ಬರು ಮುಖ್ಯ ಪಶುವೈದ್ಯಾಧಿಕಾರಿ, ಒಬ್ಬರು ಜಾನುವಾರು ಅಧಿಕಾರಿ, ಮೂವರು ಪಶುವೈದ್ಯಾಧಿಕಾರಿಗಳು, ಒಬ್ಬರು ಹಿರಿಯ ಪಶುವೈದ್ಯಕೀಯ ಪರಿವೀಕ್ಷರು, ಇಬ್ಬರು ಕಿರಿಯ ಪಶುವೈದ್ಯಕೀಯ ಪರಿವೀಕ್ಷಕರು, ಒಬ್ಬರು ಪಶುವೈದ್ಯಕೀಯ ಪರಿವೀಕ್ಷಕರು ಮತ್ತು ಏಳು ಜನ ಡಿ.ಗ್ರೂಪ್ ನೌಕರರು ಸೇರಿ ಒಟ್ಟು 16 ಸಿಬ್ಬಂದಿ ಕಾರ್ಯನಿರ್ವಹಿಸಬೇಕು.
ಆದರೆ ಒಬ್ಬರು ಹಿರಿಯ ಪಶುವೈದ್ಯಕೀಯ ಪರಿವೀಕ್ಷ, ಇಬ್ಬರು ಕಿರಿಯ ಪಶುವೈದ್ಯಕೀಯ ಪರಿವೀಕ್ಷರು, ಒಬ್ಬರು ಪಶುವೈದ್ಯಕೀಯ ಪರೀಕ್ಷಕರು ಮತ್ತು ಒಬ್ಬರು ಡಿ.ಗ್ರೂಪ್ ಸೇರಿ ಕೇವಲ ಐದು ಜನ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಒಬ್ಬರು ದೀರ್ಘರಜೆಯಲ್ಲಿದ್ದಾರೆ. ಇಬ್ಬರು ಕಿರಿಯ ವೈದ್ಯರು ಗುತ್ತಿಗೆ ಆದಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟು 11 ಹುದ್ದೆಗಳು ಖಾಲಿಯಿವೆ. ಇಬ್ಬರು ಗುತ್ತಿಗೆ ಆಧಾರದಲ್ಲಿ ಪಶುವೈದ್ಯರನ್ನು ಇಲಾಖೆ ನೇಮಿಸಿದೆ. ತಾಲ್ಲೂಕಿನ ಬಹುತೇಕ ಪಶು ಚಿಕಿತ್ಸಾ ಕೇಂದ್ರಗಳು ಇವರ ಮೇಲೆಯೇ ಅವಲಂಬಿತವಾಗಿದೆ.
ತಾಲ್ಲೂಕು ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಹುದ್ದೆ ಇದ್ದರೂ ಕಂಪ್ಲಿ ತಾಲ್ಲೂಕಿನ ಮೆಟ್ರಿ ಗ್ರಾಮದ ಪಶುವೈದ್ಯರು ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಿಗದಿತ ಸಿಬ್ಬಂದಿಯನ್ನು ನೇಮಿಸಿ ತಾಲ್ಲೂಕಿನ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು ಎನ್ನುವ ಒತ್ತಾಯ ರೈತರು ಮತ್ತು ಕುರಿಗಾಹಿಗಳಿಂದ ಕೇಳಿ ಬಂದಿದೆ.
ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ನಡೆಯಬೇಕು. ಇರುವ ಸಿಬ್ಬಂದಿ ಬಳಸಿಕೊಂಡು ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆಪ್ರದೀಪ್, ಪ್ರಬಾರ ಮುಖ್ಯ ಆಡಳಿತ ಪಶುವೈದ್ಯಾಧಿಕಾರಿ
ಎಲ್ಲ ಕಡೆ ಸಮಸ್ಯೆ ಇದೆ. ನೇಮಕಾತಿ ಪ್ರಕ್ರಿಯೆ ಅತಿ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ. ಸಿಬ್ಬಂದಿ ನೇಮಕಾತಿ ನಂತರ ತಾಲ್ಲೂಕಿಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿರುವೆ.ಜೆ.ಎನ್.ಗಣೇಶ್, ಶಾಸಕ
ಅಂಕಿ-ಅಂಶ
ಒಟ್ಟು ಜಾನುವಾರುಗಳ ಸಂಖ್ಯೆ:17350
ಕುರಿಗಳ ಸಂಖ್ಯೆ: 81320
ಮಂಜೂರಾದ ಹುದ್ದೆಗಳು: 16
ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ: 05
ಖಾಲಿ ಹುದ್ದೆ: 11
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.