ಹೊಸಪೇಟೆ: ಎರಡು ವಾರಗಳಿಂದ ಅಪಾರ ಪ್ರಮಾಣದಲ್ಲಿ ನಾಗಪುರ ಕಿತ್ತಳೆ ಮಾರುಕಟ್ಟೆಗೆ ಬರುತ್ತಿದೆ. ಆದರೆ, ಅದರ ಬೆಲೆ ಮಾತ್ರ ಯಥಾಸ್ಥಿತಿಯಲ್ಲಿದೆ.
ಎರಡು ವಾರಗಳ ಹಿಂದೆ ಪ್ರತಿ ಕೆ.ಜಿ. ಕಿತ್ತಳೆ ₹50ರಿಂದ ₹60ಕ್ಕೆ ಮಾರಾಟವಾಗುತ್ತಿತ್ತು. ಈ ವಾರವೂ ಅದೇ ಬೆಲೆ ಇದೆ. ಹೆಚ್ಚಿನ ಪ್ರಮಾಣದಲ್ಲಿ ಕಿತ್ತಳೆ ಬರುತ್ತಿರುವುದರಿಂದ ಬೆಲೆ ಕುಸಿಯಬಹುದು ಎಂಬ ಸಾರ್ವಜನಿಕರ ನಿರೀಕ್ಷೆ ಹುಸಿಯಾಗಿದೆ.
ಇದೇ ವೇಳೆ ಕಲ್ಲಂಗಡಿ ದರ ಸ್ವಲ್ಪ ಕುಸಿತ ಕಂಡಿದೆ. ಪ್ರತಿ ಕೆ.ಜಿ. ಕಲ್ಲಂಗಡಿ ಹೋದ ವಾರ ₹20 ಇತ್ತು. ಈ ವಾರ ಅದು ₹15ಕ್ಕೆ ತಗ್ಗಿದೆ.
ಇನ್ನು, ಬಹುತೇಕ ತರಕಾರಿಗಳ ಬೆಲೆ ಗಣನೀಯವಾಗಿ ತಗ್ಗಿದೆ. ₹30ರಿಂದ ₹40 ಇದ್ದ ಈರುಳ್ಳಿ ಬೆಲೆ ₹20ರಿಂದ ₹25ಕ್ಕೆ ಇಳಿದಿದೆ. ಟೊಮೆಟೊ ₹20ರಿಂದ ₹10, ಆಲೂಗಡ್ಡೆ ₹40ರಿಂದ ₹20, ಕ್ಯಾರೆಟ್ ₹80ರಿಂದ ₹40, ಬೀನ್ಸ್ ₹80ರಿಂದ ₹35, ಬದನೆಕಾಯಿ 30ರಿಂದ ₹10, ಬೆಳ್ಳುಳ್ಳಿ ₹150ರಿಂದ ₹80, ಸೌತೆಕಾಯಿ ₹40ರಿಂದ ₹30, ಬೆಂಡೆಕಾಯಿ ₹40ರಿಂದ ₹30, ಮೆಣಸಿನಕಾಯಿ ₹60ರಿಂದ ₹30ಕ್ಕೆ ಇಳಿದಿದೆ.
ಮಧ್ಯಮಗಾತ್ರದ ಒಂದು ಹೂಕೋಸು ₹25ರಿಂದ ₹10, ಸೊರೆಕಾಯಿ ₹30ರಿಂದ ₹20ಕ್ಕೆ ಇಳಿದಿದೆ. ₹10ಕ್ಕೆ ಎರಡು ಮಧ್ಯಮ ಗಾತ್ರದ ಕೊತ್ತಂಬರಿ, ಮೆಂತೆ ಸೊಪ್ಪು ಮಾರಾಟವಾಗುತ್ತಿದೆ. ಇದೇ ವೇಳೆ ಮಾರುಕಟ್ಟೆಗೆ ಕರಿಬೇವು ಬರುವುದು ಕಡಿಮೆಯಾಗಿರುವುದರಿಂದ ಅದರ ಬೆಲೆ ಸ್ವಲ್ಪ ಹೆಚ್ಚಾಗಿದೆ.
‘ಇನ್ನೆರಡು ವಾರ ಇದೇ ರೀತಿ ತರಕಾರಿಗಳ ಬೆಲೆ ಇರಬಹುದು. ಬಳಿಕ ಬಿಸಿಲು ಹೆಚ್ಚಾಗುವುದರಿಂದ ಸಹಜವಾಗಿಯೇ ಎಲ್ಲದರ ದರ ಮತ್ತೆ ಹೆಚ್ಚಾಗುತ್ತದೆ’ ಎಂದು ತರಕಾರಿ ವ್ಯಾಪಾರಿ ರಾಜೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.