ಕಂಪ್ಲಿ: ಸ್ಥಳೀಯ ಮೀನುಗಾರರು ಪಟ್ಟಣದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿ-29ರ ಪಾದಾಚಾರಿ ರಸ್ತೆಯಲ್ಲಿ ಮೀನು ಮಾರಾಟ ಮಾಡದಂತೆ ಜಿಲ್ಲಾ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಣ್ಣ ಸೂಚಿಸಿದರು.
ಇಲ್ಲಿಯ ಕೋಟೆ ಬಳಿಯ ತುಂಗಭದ್ರಾ ನದಿ ಸೇತುವೆ ಸಮೀಪ ಹೆದ್ದಾರಿ ಬದಿ ಮೀನು ಮಾರಾಟ ಮಾಡುತ್ತಿರುವ ಕುರಿತು ಬಳ್ಳಾರಿಯಲ್ಲಿ ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಗೊಂಡ ಹಿನ್ನೆಲೆಯಲ್ಲಿ ಗುರುವಾರ ಭೇಟಿ ನೀಡಿ ಮೀನು ಮಾರಾಟಗಾರರೊಂದಿಗೆ ಚರ್ಚಿಸಿದರು.
ರಸ್ತೆಗೆ ಹೊಂದಿಕೊಂಡಂತೆ ಮೀನು ಮಾರಾಟ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮೀನಿನ ಮೇಲೆ ಕಸ, ದೂಳು ಆವರಿಸುತ್ತದೆ. ಶುದ್ಧ ಪರಿಸರದಲ್ಲಿ ತಾಜಾ ಮೀನು ಮಾರಾಟ ಮಾಡುವಂತೆ ಸಲಹೆ ನೀಡಿದರು. ಮೀನುಗಾರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಸ್.ಆರ್. ಚಿನ್ನರಾಜು ಮತ್ತು ಮೀನುಗಾರರು ಮಾತನಾಡಿ, ಮೀನು ಮಾರುಕಟ್ಟೆಯನ್ನು ಸುಸಜ್ಜಿತಗೊಳಿಸಿ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.
ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಮಾತನಾಡಿ, ಮಾಂಸ ಮಾರುಕಟ್ಟೆಯಲ್ಲಿಯೇ ಮೀನು ಮಾರಾಟ ಮಾಡಲು ಅಗತ್ಯ ಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಪ್ರಕಾಶಬಾಬು, ಮೀನುಗಾರ ಸಹಕಾರ ಸಂಘದ ಉಪಾಧ್ಯಕ್ಷ ರಾಜಶೇಖರ, ಮೀನುಗಾರರಾದ ನಾಗೇಶ, ಮಾದೇಶ, ಅಶೋಕ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.