ಬಳ್ಳಾರಿ: ನಗರದ ಕಮೇಲ ರಸ್ತೆಯ ಸಿ.ಎಂ ಬೀದಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಜಾತಾ ತಾಡಿಪತ್ರಿ ಅವರು ನಿವೃತ್ತರಾಗಿ 11 ವರ್ಷಗಳು ಸಂದಿವೆ. ಆದರೆ, ಅವರು ಅದೇ ಶಾಲೆಯಲ್ಲಿ ಪಾಠ ಮಾಡುವುದನ್ನು ಮುಂದುವರಿಸಿದ್ದಾರೆ. ಒಂದು ದಿನವೂ ರಜೆ ಪಡೆದಿಲ್ಲ. ಗೌರವಧನ ಅಥವಾ ಸಂಬಳವೂ ಪಡೆದಿಲ್ಲ.
1954ರಲ್ಲಿ ಜನಿಸಿದ ಸುಜಾತಾ ಅವರು, ಕಲಬುರಗಿಯಲ್ಲಿ ಟಿಸಿಎಚ್ ಮುಗಿಸಿ 1974ರಲ್ಲಿ ಬಳ್ಲಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು. ಕಂಪ್ಲಿಯಿಂದ ಬಳ್ಳಾರಿಯ ಕಂಬ್ಳಿ ಬಜಾರ್, ಹರಗಿನಡೋಣಿ, ಕಮ್ಮರಚೇಡು ಶಾಲೆಗಳಲ್ಲಿ ಪಾಠ ಮಾಡಿದ್ದಾರೆ. ಕಮ್ಮರಚೇಡು ಶಾಲೆಯಿಂದ 2014ರಲ್ಲಿ ನಿವೃತ್ತರಾದ ಸುಜಾತಾ ಅವರು ಮರುದಿನವೇ, ಕಮೇಲ ರಸ್ತೆಯ ಸರ್ಕಾರಿ ಶಾಲೆಗೆ ಹಾಜರಾಗಿ ಮಕ್ಕಳಿಗೆ ಪಾಠ ಮಾಡತೊಡಗಿದರು.
‘ನಾನು ಸರ್ಕಾರಿ ಶಾಲೆಯಲ್ಲಿ ಮಾತ್ರ ಪಾಠ ಮಾಡುತ್ತೇನೆ. ಇಲ್ಲಿ ಬರುವವರೆಲ್ಲ ಬಡ ಮಕ್ಕಳೇ. ಬಡವರಿಗೆ ನನ್ನ ಕೈಲಾದ ಸೇವೆ ನೀಡಬೇಕು ಎಂಬ ಕಾರಣಕ್ಕೆ ಉಚಿತವಾಗಿ ಪಾಠ ಮಾಡುತ್ತೇನೆ. ಹೀಗೆ ಮಾಡುವುದರಿಂದ ನಾನು ನಿತ್ಯ ಚಟುವಟಿಕೆಯಲ್ಲಿ ಇರುತ್ತೇನೆ’ ಎಂದು ಸುಜಾತಾ ಹೇಳಿದರು.
‘ಸುಜಾತಾ ಅವರು ಸದ್ಯ ಪತಿ ಮತ್ತು ಸಹೋದರನ ಜೊತೆಗೆ ನಗರದ ಸತ್ಯನಾರಾಯಣ ಪೇಟೆಯ ಬಾಡಿಗೆ ಮನೆಯಲ್ಲಿ ನೆಲಸಿದ್ದಾರೆ. ಪಿಂಚಣಿ ಹಣದಲ್ಲಿ ಬದುಕು ನಡೆಸುತ್ತಿದ್ದಾರೆ. ಶಾಲೆಗೆ ನಿತ್ಯ ನಡೆದುಕೊಂಡು ಬರುತ್ತಾರೆ. ಶಾಲೆಯ ಸಮಾರಂಭಗಳಿಗೆ ತಮ್ಮ ಪಾಲಿನ ಹಣ ನೀಡುತ್ತಾರೆ. ಸ್ವಾಭಿಮಾನಿಯಾದ ಸುಜಾತಾ ಅವರು ಯಾರಿಂದಲೂ ಕಿಂಚಿತ್ತು ನೆರವೂ ಅಪೇಕ್ಷಿಸುವುದಿಲ್ಲ’ ಎಂದು ಶಾಲೆಯ ಶಿಕ್ಷಕರು ಹೇಳಿದರು.
‘ಸುಜಾತಾ ಅವರು ನಿವೃತ್ತಿಯಾದ ದಿನದಿಂದ ಇಂದಿನವರೆಗೆ ಒಂದೇ ಒಂದು ದಿನವೂ ತಪ್ಪಿಸದೇ ಶಾಲೆಗೆ ಬರುತ್ತಾರೆ. ನಮಗೆಲ್ಲರಿಗಿಂತ ಮೊದಲೇ ಶಾಲೆಗೆ ಬರುವ ಅವರು ನಾವು ಹೋದ ಬಳಿಕವೇ ಶಾಲೆಯಿಂದ ನಿರ್ಗಮಿಸುತ್ತಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಪೊಂಪನಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.