ಸಂಡೂರು ತಾಲ್ಲೂಕಿನ ಎಸ್.ಗೊಲ್ಲರಹಟ್ಟಿ ಗ್ರಾಮದಲ್ಲಿ ಶೆಡ್ನಲ್ಲಿ ವಾಸವಿದ್ದ ಬಾಣಂತಿ, ಮಗುವನ್ನು ಅಧಿಕಾರಿಗಳು ಮನೆಗೆ ಸೇರಿಸಿದ್ದಾರೆ
ಸಂಡೂರು: ತಾಲ್ಲೂಕಿನ ಎಸ್.ಗೊಲ್ಲರಹಟ್ಟಿ ಗ್ರಾಮದಲ್ಲಿನ ಕುಟುಂಬವೊಂದು ಮೂಡ ನಂಬಿಕೆಯಿಂದ ಬಾಣಂತಿ, ಮಗುವನ್ನು ಮನೆಯ ಹೊರಗಿನ ಶೇಡ್ನಲ್ಲಿ ಇರಿಸಲಾಗಿತ್ತು. ವೈದ್ಯಾಧಿಕಾರಿ, ಪಿಡಿಒ ನೇತೃತ್ವದಲ್ಲಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಬಾಣಂತಿಯ ಕುಟುಂಬದವರಿಗೆ ಮನವರಿಕೆ ಮಾಡಿ ಬಾಣಂತಿ, ಮಗುವನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾದ ಘಟನೆ ಗುರುವಾರ ನಡೆದಿದೆ.
ಗ್ರಾಮದ ಬಾಣಂತಿ ರೇಣುಕಮ್ಮ ಅವರು ಚೋರುನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು, ತಾಯಿ, ಮಗು ಮನೆಗೆ ತೆರಳಿದಾಗ ಕುಟುಂಬಸ್ತರು ಮೂಢನಂಬಿಕೆಯಿಂದ ಮನೆಯ ಹೊರಗಿನ ಶೆಡ್ನಲ್ಲಿ ಇರಿಸಿದ್ದರು.
ಘಟನೆಯ ವಿಷಯ ತಿಳಿದ ಅಧಿಕಾರಿಗಳು ಕುಟುಂಬದವರೊಂದಿಗೆ ಚರ್ಚಿಸಿ, ಮೂಢನಂಬಿಕೆಯ ಬಗ್ಗೆ ಜಾಗೃತಿ ಮೂಡಿಸಿ ತಾಯಿ, ಮಗುವಿನ ಸಂರಕ್ಷಣೆಯ ದೃಷ್ಠಿಯಿಂದ ಮನೆಯಲ್ಲಿ ತಂಗಲು ಅವಕಾಶ ಮಾಡಿಕೊಟ್ಟಿದ್ದಾರೆ.
ಚೋರುನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಕ್ಷಯ್ಕುಮಾರ್ ಮಾತನಾಡಿ, ‘ರೇಣುಕಮ್ಮ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ತಾಯಿ, ಮಗುವನ್ನು ಅವರ ಕುಟುಂಬದವರು ಮೂಢ ನಂಬಿಕೆಯಿಂದ ಮನೆಯ ಹೊರಗಿನ ಶೆಡ್ನಲ್ಲಿ ಇರಿಸಿದ್ದರು. ವಿಷಯ ತಿಳಿದ ತಕ್ಷಣ ಅಧಿಕಾರಿಗಳೊಂದಿಗೆ ತೆರಳಿ, ಜಿಲ್ಲಾ ಆರೋಗ್ಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಾಣಂತಿ, ಮಗುವಿನ ಆರೋಗ್ಯದ ಸುರಕ್ಷತೆಗಾಗಿ ಮನೆಯೊಳಗಿನ ವಾಸದ ಮಹತ್ವವನ್ನು ಕುಟುಂಬದ ಸದಸ್ಯರಿಗೆ ತಿಳಿಸಿ ಮನವರಿಕೆ ಮಾಡಲಾಯಿತು. ನಂತರ ಕುಟುಂಬದವರು ನಮ್ಮ ಮನವಿಗೆ ಸ್ಪಂದಿಸಿ ತಾಯಿ, ಮಗುವನ್ನು ಮನೆಯ ಒಳಗೆ ಸೇರಿಸಿಕೊಂಡರು’ ಎಂದು ತಿಳಿಸಿದರು.
ಚೋರುನೂರು ಗ್ರಾಮ ಪಂಚಾಯಿತಿಯ ಪಿಡಿಒ ಕರಿಬಸವರಾಜ್, ಆರೋಗ್ಯ ಅಧಿಕಾರಿ ಹನುಮಂತಪ್ಪ, ಆಶಾಕಾರ್ಯಕರ್ತೆಯರು, ಸಾರ್ವಜನಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.