ADVERTISEMENT

ಎಂಟು ಬೆಲ್ಲದ ಗಾಣಗಳ ಮೇಲೆ ದಾಳಿ: ರಸಾಯನಿಕ, ಸಕ್ಕರೆ ಚೀಲ ವಶಕ್ಕೆ

ಪ್ರಜಾವಾಣಿ ವರದಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 10:37 IST
Last Updated 3 ಸೆಪ್ಟೆಂಬರ್ 2020, 10:37 IST
ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ನೇತೃತ್ವದ ತಂಡ ಬೆಲ್ಲದ ಗಾಣಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ನೇತೃತ್ವದ ತಂಡ ಬೆಲ್ಲದ ಗಾಣಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.    
""

ಹೊಸಪೇಟೆ: ತಾಲ್ಲೂಕಿನ ಮಲಪನಗುಡಿಯ ಎಂಟು ಬೆಲ್ಲದ ಗಾಣಗಳ ಮೇಲೆ ದಾಳಿ ನಡೆಸಿರುವ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ನೇತೃತ್ವದ ತಂಡ ಅಲ್ಲಿರುವ ರಸಾಯನಿಕ, ಸಕ್ಕರೆ ಚೀಲಗಳನ್ನು ಗುರುವಾರ ವಶಪಡಿಸಿಕೊಂಡಿದೆ.

‘ಆಲೆಮನೆಯಲ್ಲ, ಸಕ್ಕರೆ ಮನೆ!’ ಶೀರ್ಷಿಕೆ ಅಡಿಯಲ್ಲಿ ಆ. 31ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಅಧಿಕ ಲಾಭಕ್ಕಾಗಿ ವಿಷಕಾರಿ ರಸಾಯನಿಕ ಬಳಸಿ ಬೆಲ್ಲ ತಯಾರಿಸಲಾಗುತ್ತಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.

ವರದಿಗೆ ಎಚ್ಚೆತ್ತುಕೊಂಡ ತಾಲ್ಲೂಕು ಆಡಳಿತವು ಎಂಟು ಗಾಣಗಳ ಮೇಲೆ ದಾಳಿ ನಡೆಸಿ, ಅಕ್ರಮದಲ್ಲಿ ತೊಡಗಿರುವ ಗಾಣ ಮಾಲೀಕರ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದೆ.

ADVERTISEMENT

‘ಇತ್ತೀಚೆಗೆ ‘ಪ್ರಜಾವಾಣಿ’ಯಲ್ಲಿ ಬೆಲ್ಲದ ಗಾಣಗಳ ಕುರಿತ ಬಂದ ವರದಿ ಓದಿದ್ದೆ. ನನಗೂ ಗಾಬರಿಯಾಗಿತ್ತು. ಈ ಕುರಿತು ಕೆಲವರು ದೂರು ಸಹ ಕೊಟ್ಟಿದ್ದರು. ಇಂದು ದಾಳಿ ನಡೆಸಿದಾಗ, ಪೌಡರ್‌ ರೂಪದ ಸಕ್ಕರೆ, ಹೈಡ್ರೊಪವರ್‌ ಹೆಸರಿನ ವಿಷಕಾರಕ ರಸಾಯನಿಕ ಬಳಸಿ ಬೆಲ್ಲ ತಯಾರಿಸುತ್ತಿರುವುದು ಗೊತ್ತಾಗಿದೆ. ರಾಮಲಿಂಗ ಫಕೀರಪ್ಪ ಅವರಿಗೆ ಸೇರಿದ ಎರಡು, ಜಗನ್‌ ಮರಿಸ್ವಾಮಿ, ಮನೋಹರ್‌, ಕೃಷ್ಣಕಾಂತ್‌, ಜ್ಞಾನಪ್ಪ, ಒ. ತಾಯಪ್ಪ ಹಾಗೂ ಕೆ. ಆಗಣ್ಣ ಎನ್ನುವವರಿಗೆ ಸೇರಿದ ತಲಾ ಒಂದು ಗಾಣದಲ್ಲಿ ಅಕ್ರಮ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇವರ ವಿರುದ್ಧ ಠಾಣೆಗೆ ದೂರು ಕೊಟ್ಟಿದ್ದು, ಪ್ರಕರಣ ದಾಖಲಾಗಬೇಕಿದೆ’ ಎಂದು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.