ಬಳ್ಳಾರಿ: ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಋತುವಿನ ಜೋಳ ಮತ್ತು ರಾಗಿ ಖರೀದಿಗೆ ನೋಂದಣಿ ಆರಂಭವಾಗಿ ಎರಡೂವರೆ ತಿಂಗಳಾಗಿದೆ. ಆದರೆ, ಗೋಣಿ ಚೀಲಗಳ ಕೊರತೆಯಿಂದಾಗಿ ಇನ್ನೂ ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲ.
ಕಳೆದ ವರ್ಷದ ಡಿಸೆಂಬರ್ 1ರಿಂದ ಜೋಳ ಖರೀದಿಗೆ ರೈತರ ಹೆಸರು ನೋಂದಣಿ ಪ್ರಕ್ರಿಯೆಯು ಆರಂಭವಾಗಿದೆ. ಬಿಳಿಜೋಳ (ಮಾಲ್ದಂಡಿ) ಕ್ವಿಂಟಲ್ಗೆ ₹3,421, ಬಿಳಿಜೋಳ (ಹೈಬ್ರಿಡ್ ) ಕ್ವಿಂಟಲ್ಗೆ ₹3,371 ಮತ್ತು ರಾಗಿ ಕ್ವಿಂಟಲ್ಗೆ ₹4,290 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.
ರಾಜ್ಯದಲ್ಲಿ ಫೆಬ್ರುವರಿ 21ರ ವರೆಗೆ 36.22 ಲಕ್ಷ ಕ್ವಿಂಟಲ್ ರಾಗಿ ಮಾರಾಟಕ್ಕೆ 2.38 ಲಕ್ಷ ರೈತರು ನೋಂದಣಿ ಮಾಡಿಸಿದ್ದಾರೆ. 7.12 ಲಕ್ಷ ಕ್ವಿಂಟಲ್ ಜೋಳ ಮಾರಾಟಕ್ಕೆ 17,500 ರೈತರು ನೋಂದಾಯಿಸಿದ್ದಾರೆ.
‘ಪಶ್ಚಿಮ ಬಂಗಾಳದಲ್ಲಿ ಇರುವ ಭಾರತೀಯ ಸೆಣಬು ನಿಗಮದಿಂದ ಗೋಣಿಚೀಲಗಳನ್ನು ಖರೀದಿಸಲಾಗುತ್ತದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ನೋಡೆಲ್ ಏಜೆನ್ಸಿ ಆಗಿದೆ. ಖರೀದಿಸಲಾದ ಗೋಣಿಚೀಲಗಳನ್ನು ಸಂಬಂಧಪಟ್ಟ ಏಜೆನ್ಸಿಗಳಿಗೆ ಜಿಲ್ಲಾವಾರು ಹಂಚಿಕೆ ಮಾಡಲಾಗುತ್ತದೆ. ಈ ಬಾರಿ ಚೀಲಗಳ ಖರೀದಿಗಾಗಿ ನಡೆಸಿದ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದೆ’ ಎಂಬುದು ಅಧಿಕಾರಿಗಳ ವಿವರಣೆ.
ಹಂತ ಹಂತವಾಗಿ ಪೂರೈಕೆ: ‘ಬೇಡಿಕೆಗೆ ತಕ್ಕಂತೆ ಗೋಣಿಚೀಲ ಪೂರೈಕೆಯಾಗುತ್ತಿಲ್ಲ. ಹಂತ ಹಂತವಾಗಿ ಪೂರೈಸುವುದಾಗಿ ಹೇಳಿದರೂ ಸರ್ಕಾರವು ಈವರೆಗೆ ಶೇ 10ರಷ್ಟು ಮಾತ್ರ ಪೂರೈಸಿದೆ. ಅಗತ್ಯ ಪ್ರಮಾಣದಲ್ಲಿ ಗೋಣಿ ಚೀಲಗಳು ಸಿಕ್ಕರೂ ಕೆಲವೇ ದಿನಗಳಲ್ಲಿ ಅವು ಖಾಲಿಯಾಗಿ ಮತ್ತೆ ಖರೀದಿ ಪ್ರಕ್ರಿಯೆ ನಿಲ್ಲುವ ಸಾಧ್ಯತೆ ಇದೆ. ಖರೀದಿ ಬಗ್ಗೆ ರೈತರು ಪದೇ ಪದೇ ವಿಚಾರಿಸುತ್ತಿದ್ದು, ಅವರಿಗೆ ಉತ್ತರಿಸುವುದು ಕಷ್ಟವಾಗುತ್ತಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.
ಗೋಣಿಚೀಲದ ಕೊರತೆ ಕಾರಣಕ್ಕೆ ಈವರೆಗೆ ಖರೀದಿ ನಡೆದಿರಲಿಲ್ಲ. ಜಿಲ್ಲಾಧಿಕಾರಿಯು ಸರ್ಕಾರದೊಂದಿಗೆ ಮಾತನಾಡಿದ್ದಾರೆ. ಕೆಲವೇ ದಿನಗಳಲ್ಲಿ ಚೀಲ ಲಭ್ಯವಾಗಲಿದ್ದು ಖರೀದಿ ಆರಂಭವಾಗಲಿದೆ.– ಸಕೀನಾ, ಉಪ ನಿರ್ದೇಶಕಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ಗೋಣಿಚೀಲದ ನೆಪವೊಡ್ಡಿ ಸರ್ಕಾರ ಖರೀದಿ ವಿಳಂಬ ಮಾಡಿದ್ದು ಸರಿಯಲ್ಲ. ಕೂಡಲೇ ಪೂರ್ಣ ಪ್ರಮಾಣದಲ್ಲಿ ಚೀಲಗಳನ್ನು ಪೂರೈಸಿ ಖರೀದಿ ಆರಂಭಿಸಬೇಕು.–ಕರೂರು ಮಾಧವ ರೆಡ್ಡಿ, ಅಧ್ಯಕ್ಷ ರಾಜ್ಯ ರೈತ ಸಂಘ
‘ಖರೀದಿ ವಿಳಂಬವಾದಷ್ಟೂ ನಷ್ಟ’
‘ಜೋಳ ಖರೀದಿ ವಿಳಂಬವಾದರೆ ಅದರ ದಾಸ್ತಾನು ಮತ್ತು ವಿಲೇವಾರಿ ಕಷ್ಟವಾಗುತ್ತದೆ. ಜೋಳದ ಕಾಳಿನ ಬಾಳಿಕೆ ಗರಿಷ್ಠ 5 ತಿಂಗಳು ಮಾತ್ರ. ಧೂಮೀಕರಣ ಕೀಟನಾಶಕ ಸಿಂಪಡಿಸಿದರೆ 8 ರಿಂದ 10 ತಿಂಗಳು ಬರಬಹುದು. ಈಗಾಗಲೇ ಡಿಸೆಂಬರ್ನಲ್ಲೇ ಫಸಲು ಕಟಾವುಗೊಂಡಿದೆ. ಇನ್ನೂ ಖರೀದಿಯಾಗಿಲ್ಲ’ ಎಂದು ರಾಜ್ಯ ಉಗ್ರಾಣ ನಿಗಮದ ಅಧಿಕಾರಿಯೊಬ್ಬರು ಹೇಳಿದರು.
‘ಇನ್ನೂ ಜೋಳ ಖರೀದಿ ಆಗಿಲ್ಲ. ನಮಗೆ ಬರುವಾಗಲೇ ಎರಡೂವರೆ ತಿಂಗಳು ಕಳೆದಿದೆ. ಬಂದ ಬಳಿಕ ಮೂರು ತಿಂಗಳಲ್ಲಿ ಹುಳುಗಳ ಕಾಟ ಶುರುವಾಗುತ್ತದೆ. ಅಷ್ಟರೊಳಗೆ ನಾವು ಹಂಚಿಕೆ ಮಾಡಬೇಕು. ಇಲ್ಲವಾದರೆ ದಾಸ್ತಾನು ಹಾಳಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.