ADVERTISEMENT

ಕಾಂಗ್ರೆಸ್‌ನ 23 ವರ್ಷದ‌ ತ್ರಿವೇಣಿ ಬಳ್ಳಾರಿ ಮೇಯರ್: ಜಾನಕಮ್ಮ ಉಪ ಮೇಯರ್

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 10:17 IST
Last Updated 29 ಮಾರ್ಚ್ 2023, 10:17 IST
ಬಳ್ಳಾರಿ ಮೇಯರ್ ‌ಅಗಿ ಆಯ್ಕೆಯಾದ ತ್ರಿವೇಣಿ (ಬಲಗಡೆ) ಮತ್ತು‌  ಜಾನಕಮ್ಮ (ಎಡಗಡೆ) ಇದ್ದಾರೆ.‌ಮೇಯರ್  ತಂದೆ ಸೂರಿ ಬಲ ತುದಿಯಲ್ಲಿ ಮತ್ತು ತಾಯಿ ಸುಶೀಲಾಬಾಯಿ ಹಿಂದೆ‌ ಇದ್ದಾರೆ
ಬಳ್ಳಾರಿ ಮೇಯರ್ ‌ಅಗಿ ಆಯ್ಕೆಯಾದ ತ್ರಿವೇಣಿ (ಬಲಗಡೆ) ಮತ್ತು‌ ಜಾನಕಮ್ಮ (ಎಡಗಡೆ) ಇದ್ದಾರೆ.‌ಮೇಯರ್ ತಂದೆ ಸೂರಿ ಬಲ ತುದಿಯಲ್ಲಿ ಮತ್ತು ತಾಯಿ ಸುಶೀಲಾಬಾಯಿ ಹಿಂದೆ‌ ಇದ್ದಾರೆ   

ಬಳ್ಳಾರಿ: ನಗರದ ಮೇಯರ್ ಅಗಿ ಕಾಂಗ್ರೆಸ್‌ನ ತ್ರಿವೇಣಿ ಮತ್ತು ಉಪ ಮೇಯರ್ ಅಗಿ‌‌ ಜಾನಕಮ್ಮ ಬುಧವಾರ ಆಯ್ಕೆಯಾದರು.

ಮೇಯರ್ ಗದ್ದುಗೆಗಾಗಿ ಕಾಂಗ್ರೆಸ್‌ನಲ್ಲಿ ಮೂರು ದಿನಗಳಿಂದ ನಡೆದ‌ ಗುದ್ದಾಟ ಕೊನೆ ಗಳಿಗೆವರೆಗೂ ನಡೆಯಿತು. ಇದರ ಲಾಭ ಪಡೆಯಲು ಬಿಜೆಪಿ ತೆರೆಮರೆಯಲ್ಲಿ ಪ್ರಯತ್ನಿಸಿತು. ಅದು ಕೈಗೂಡಲಿಲ್ಲ.

ಮೇಯರ್ ಸ್ಥಾನಕ್ಕೆ ತ್ರಿವೇಣಿ,‌ ಉಮಾದೇವಿ‌ ಮತ್ತು ಕುಬೇರ ನಾಮಪತ್ರ‌‌ ಸಲ್ಲಿಸಿದ್ದರು. ಪಕ್ಷದ‌ ‌ವೀಕ್ಷಕರಾದ ಚಂದ್ರಪ್ಪ ಮತ್ತು ಜಿಲ್ಲಾ ಮುಖಂಡರು ‌ಉಳಿದಿಬ್ಬರ ನಾಮಪತ್ರ ವಾಪಸ್ ತೆಗೆಸಿದರು. ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮೇಯರ್ ಸ್ಥಾನಕ್ಕೆ ನೇರ ಹಣಾಹಣಿ ನಡೆಯಿತು.

ತ್ರಿವೇಣಿಗೆ 28 ಮತಗಳು ಬಿದ್ದರೆ,‌ ಬಿಜೆಪಿಯ ನಾಗರತ್ನಮ್ಮ ಅವರಿಗೆ 16 ಮತಗಳು ಬಂದವು. ಉಪ ಮೇಯರ್ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಜಾನಕಮ್ಮ ಅವರ ಆಯ್ಕೆ‌ ಅವಿರೋಧವಾಯಿತು.

ಕೆಪಿಸಿಸಿ ವೀಕ್ಷಕರಾದ‌‌ ಚಂದ್ರಪ್ಪ ಮಂಗಳವಾರ ಸಂಜೆಯೇ ಬಳ್ಳಾರಿ ಗೆ ಬಂದಿದ್ದರು. ಮಧ್ಯರಾತ್ರಿವರೆಗೂ ಪಾಲಿಕೆ‌ ಸದಸ್ಯರ ಜತೆ ಸಮಾಲೋಚಿಸಿ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಶ್ರಮಿಸಿದರೂ ಪ್ರಯೋಜನ ಆಗಲಿಲ್ಲ. ಬೆಳಿಗ್ಗೆ ಪುನಃ ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಸಿದರು. ಕೊನೆ ಕ್ಷಣದವರೆಗೆ ಹಗ್ಗ‌ ಜಗ್ಗಾಟ ನಡೆಯಿತು.

ಇದಾದ‌ ಬಳಿಕ‌ ಕುಬೇರ ನಾಮಪತ್ರ ವಾಪಸ್ ಪಡೆದರು. ರಾಜ್ಯಸಭೆ‌ ಕಾಂಗ್ರೆಸ್‌ ಸದಸ್ಯ ಸಯ್ಯದ್ ನಾಸಿರ್‌ ಹುಸೇನ್ ನಾಮಪತ್ರ ವಾಪಸ್ ಪಡೆಯಲು ಉಮಾದೇವಿ ಅವರಿಗೆ ‌ಸೂಚಿಸಿದರು. ಆ ಸಂದರ್ಭದಲ್ಲಿ ಉಮಾದೇವಿ ಕಣ್ಣೀರಿಟ್ಟರು.

ಪಾಲಿಕೆಯಲ್ಲಿ‌ 39 ಸದಸ್ಯರಿದ್ದು ಕಾಂಗ್ರೆಸ್ 21, ಬಿಜೆಪಿ 13 ಸದಸ್ಯರ ಬಲ ಹೊಂದಿದೆ. ಐವರು ಪಕ್ಷೇತರರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ವಿಧಾನಸಭೆ, ವಿಧಾನಪರಿಷತ್ ಹಾಗೂ ಸಂಸದರಿಗೂ ಮತದಾನದ‌ ಹಕ್ಕಿದೆ.

ADVERTISEMENT

ಬಳ್ಳಾರಿ ಗ್ರಾಮೀಣ ಕ್ಷೇತ್ರದ‌ ಕಾಂಗ್ರೆಸ್ ಶಾಸಕ ನಾಗೇಂದ್ರ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿದ್ದರೂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾರ ಪರ ವಹಿಸದೆ ‌ತಟಸ್ಥರಾಗಿ ಉಳಿದರು.

23ನೇ ವರ್ಷಕ್ಕೆ‌ ಮೇಯರ್ ಸ್ಥಾನ
ಬಳ್ಳಾರಿ ನಗರದ ಮೇಯರ್ ತ್ರಿವೇಣಿ ಅವರಿಗೆ ಈಗ ಕೇವಲ 23 ವರ್ಷ. ಅತೀ ಚಿಕ್ಕ‌ ವಯಸ್ಸಿಗೆ ಅವ‌ರು‌ ನಗರದ ಪ್ರಥಮ ಪ್ರಜೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಪದವಿ ಶಿಕ್ಷಣ ಪೂರೈಸಿದ ತಕ್ಷಣ ಅವರಿಗೆ ಮೇಯರ್ ‌ಹುದ್ದೆ ಅಲಂಕರಿಸುವ ಅದೃಷ್ಟ ಒಲಿದಿದೆ. ಅಷ್ಟೇ ಅಲ್ಲ , ಅವರ ಕುಟುಂಬದ 2ನೇ ಮೇಯರ್ ಎಂಬ ಹೆಗ್ಗಳಿಕೆಯೂ ಇವರದಾಗಿದೆ.‌ ಇವರ ತಾಯಿ ಸುಶೀಲಾಬಾಯಿ ಈ ಹಿಂದೆ ನಗರದ ಮೇಉರ್ ಆಗಿದ್ದರು.

ಮೇಯರ್ ಹುದ್ದೆ ಕೊನೆ ಗಳಿಗೆಯಲ್ಲಿ ತಪ್ಪಿದ್ದರಿಂದ‌ ಕಣ್ಣೀರಿಟ್ಟ‌ ಉಮಾದೇವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.