
ಕಂಪ್ಲಿ: ತುಂಗಭದ್ರಾ ನದಿಯಲ್ಲಿ ಸ್ವಚ್ಛತೆ ಕಾಪಾಡಲು ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಪದಾಧಿಕಾರಿಗಳು ನದಿ ಬಳಿ ಗುರುವಾರ ಭಿತ್ತಿಪತ್ರ ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
‘ಶಾಂಪೂ, ಸೋಪಿನ ವಿಷ ಸ್ನಾನ ಬಿಡಿ, ಕಡಲೆ ಹಿಟ್ಟಿನಿಂದ ಪುಣ್ಯಸ್ನಾನ ಮಾಡಿ’ ಎನ್ನುವ ಘೋಷ ವಾಕ್ಯದೊಂದಿಗೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಿಗೆ ಉಚಿತವಾಗಿ ಕಡಲೆ ಹಿಟ್ಟು ವಿತರಿಸಿದರು.
ಅಭಿಯಾನದ ಸಮಿತಿ ಸಂಚಾಲಕ ಭಟ್ಟ ರಾಮು ಮಾತನಾಡಿ, ‘ಸಾವಿರಾರು ಭಕ್ತರು ಏಕಕಾಲಕ್ಕೆ ನದಿಯಲ್ಲಿ ಸ್ನಾನಕ್ಕಾಗಿ ಸೋಪು, ಶಾಂಪೂ ಬಳಸುವುದರಿಂದ ನದಿ ನೀರು ಕಲುಷಿತಗೊಂಡು ಜಲಚರಗಳ ಜೀವಕ್ಕೆ ಕುತ್ತು ಬರುತ್ತದೆ. ಜತೆಗೆ ನೀರು ಮಲಿನಗೊಳ್ಳುವುದರಿಂದ ವಿವಿಧ ರೋಗಗಳಿಗೂ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಅಭಿಯಾನ ಸಂಚಾಲಕರಾದ ಕಲ್ಯಾಣಚೌಕಿ ಮಠ ಬಸವರಾಜಶಾಸ್ತ್ರಿ, ಅಮರೇಗೌಡ, ಇಟಗಿ ವಿರುಪಾಕ್ಷಿ, ರಾಜರಾಮ್ ಚಿತ್ರಗಾರ, ಟಿ. ಕೃಷ್ಣ, ಬಿ.ವಿ. ಗೌಡ, ನಿರಂಜನಗೌಡ, ಯು. ಬಸವರಾಜ, ದೇವದಾಸ್, ಗೋವಿಂದ, ಶ್ರೀನಿವಾಸ್ ಶ್ರೇಷ್ಠಿ, ಎನ್.ಎಂ. ಪತ್ರಯ್ಯಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.