ADVERTISEMENT

‘ಅನ್ನದ ಬಟ್ಟಲು’ ಕಂಪ್ಲಿಯಲ್ಲಿ ಯೂರಿಯಾ ಕೊರತೆ

3,917 ಹೆಕ್ಟೇರ್ ಖುಷ್ಕಿ, 21,729 ಹೆಕ್ಟೇರ್ ಭತ್ತ ಪ್ರದೇಶಕ್ಕೆ ಯೂರಿಯಾ ಗೊಬ್ಬರ ಬೇಡಿಕೆ 

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 5:40 IST
Last Updated 12 ಜುಲೈ 2025, 5:40 IST
ಕಂಪ್ಲಿ ತಾಲ್ಲೂಕು ದೇವಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು 600ಚೀಲ ಯೂರಿಯಾ ಗೊಬ್ಬರ ದಾಸ್ತಾನು ಲಭ್ಯವಿದೆ
ಕಂಪ್ಲಿ ತಾಲ್ಲೂಕು ದೇವಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು 600ಚೀಲ ಯೂರಿಯಾ ಗೊಬ್ಬರ ದಾಸ್ತಾನು ಲಭ್ಯವಿದೆ   

ಕಂಪ್ಲಿ: ಕೃಷಿಗೆ ಅವಶ್ಯವಾಗಿ ಬೇಕಾಗಿರುವ ಸಾರಜನಕ ಗೊಬ್ಬರ ಯೂರಿಯಾ ಕೊರತೆ ಸದ್ಯ ಕಂಪ್ಲಿ ತಾಲ್ಲೂಕಿನ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಈ ಬಾರಿ ಮಳೆಯಾಶ್ರಿತ ಭೂಮಿಯಲ್ಲಿ ಜೋಳ, ಮುಸುಕಿನಜೋಳ, ಸೂರ್ಯಕಾಂತಿ, ನವಣಿ, ತೊಗರಿ, ಸಜ್ಜೆ ಬೆಳೆದಿದ್ದು, ರೈತರಿಗೆ ಯೂರಿಯಾ ಗೊಬ್ಬರ ಸಕಾಲಕ್ಕೆ ದೊರೆಯುತ್ತಿಲ್ಲ. 

ಇನ್ನು ತುಂಗಭದ್ರಾ ಬಲದಂಡೆ ಮೇಲ್ಮಟ್ಟ ಮತ್ತು ಕೆಳಮಟ್ಟದ ಕಾಲುವೆಗೆ ನೀರು ಬಿಡುಗೆಯಾಗಿದ್ದು, ಭತ್ತ ನಾಟಿ ಸೇರಿದಂತೆ ವಿವಿಧ ಬೆಳೆ ಬಿತ್ತನೆ ಚುರುಕುಗೊಂಡಿದೆ. ನಾಟಿ ಪೂರ್ವ ಯೂರಿಯಾ ದಾಸ್ತಾನು ಮಾಡಲು ಗೊಬ್ಬರವಿಲ್ಲದೆ ರೈತರು ಕೈಚೆಲ್ಲಿದ್ದಾರೆ.

ADVERTISEMENT

ಬೇಡಿಕೆಗಿಂತ ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೆಲ ವ್ಯಾಪಾರಿಗಳ ಬಳಿ ಇರುವ ಯೂರಿಯಾವನ್ನು ಹೆಚ್ಚಿನ ಬೆಲೆಗೆ ಕೊಳ್ಳಬೇಕಾದ ಅನಿವಾರ್ಯತೆಯೂ ಉದ್ಭವಿಸಿದೆ.

‘ಲಭ್ಯವಿರುವ ಸ್ವಲ್ಪ ಗೊಬ್ಬರಕ್ಕೆ ರೈತರು ಪೈಪೋಟಿ ನಡೆಸುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ವ್ಯಾಪಾರಿಗಳು ಗೊಬ್ಬರದ ಜತೆಗೆ ಕ್ರಿಮಿನಾಶಕ, ಇತರೆ ಉತ್ಪನ್ನಗಳನ್ನೂ ಕೊಳ್ಳುವಂತೆ ತಾಕೀತು ಮಾಡುತ್ತಿದ್ದಾರೆ. ಇದು ರೈತರಿಗೆ ಇದು ಹೊರೆಯಾಗಿದೆ’ ಎಂದು ಹೊನ್ನಳ್ಳಿ ರೈತ ವೀರೇಶ್ ದೂರಿದರು.

45ಕೆ.ಜಿ ಯೂರಿಯಾ ಗೊಬ್ಬರ ಚೀಲ ₹265ರಿಂದ ₹300ಕ್ಕೆ ಮಾರಾಟ ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ ಸದ್ಯ ಬೆರಳೆಣಿಕೆಯಷ್ಟು ಸಹಕಾರ ಸಂಘ ಮತ್ತು ಖಾಸಗಿ ವ್ಯಾಪಾರಿಗಳಲ್ಲಿ ಮಾತ್ರ ಇದು ಲಭ್ಯವಿದೆ. ತುಂಗಭದ್ರಾ ಕಾಲುವೆಗಳಿಗೆ ನೀರು ಬಿಟ್ಟಿರುವುದರಿಂದ ನಾಲ್ಕೈದು ದಿನದಲ್ಲಿ ಈ ದಾಸ್ತಾನೂ ಖಾಲಿಯಾಗಲಿದೆ ಎಂದು ರೈತರು ತಿಳಿಸಿದರು.

ನಿಗದಿತ ಬೆಲೆಗೆ ಸಮರ್ಪಕವಾಗಿ ಯೂರಿಯಾ ಮಾರಾಟ ಮಾಡಬೇಕು. ಗೊಬ್ಬರದ ಜೊತೆಗೆ ಇತರೆ ಉತ್ಪನ್ನ ಖರೀದಿಸುವಂತೆ ಒತ್ತಡ ಹೇರುತ್ತಿರುವ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಬಿ.ವಿ. ಗೌಡ ಜಿಲ್ಲಾ ಅಧ್ಯಕ್ಷ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಂಪ್ಲಿ
ಕಂಪ್ಲಿ ತಾಲ್ಲೂಕಿಗೆ ಅಗತ್ಯವಿರುವ ಯೂರಿಯಾ ಗೊಬ್ಬರ 10ದಿನದಲ್ಲಿ ರೈತರಿಗೆ ಲಭ್ಯವಾಗಲಿದ್ದು ಅಲ್ಲಿಯವರೆಗೆ ಸಹಕರಿಸಬೇಕು. ನ್ಯಾನೋ ಯೂರಿಯಾ ದ್ರಾವಣವನ್ನು ಪರ್ಯಾಯವಾಗಿ ಬಳಸಬಹುದು.  
ಸಿ.ಎ. ಮಂಜುನಾಥರೆಡ್ಡಿ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಸಿರುಗುಪ್ಪ.

ಸಾವಿರಾರು ಎಕರೆಗೆ ಗೊಬ್ಬರ ಬೇಡಿಕೆ:

ಖುಷ್ಕಿ ಪ್ರದೇಶದ 3917ಹೆಕ್ಟೇರ್ ತುಂಗಭದ್ರಾ ಬಲದಂಡೆ ಕೆಳಮಟ್ಟ ಕಾಲುವೆ ವ್ಯಾಪ್ತಿಯ ಸುಮಾರು 6685ಹೆಕ್ಟೇರ್ ತುಂಗಭದ್ರಾ ಬಲದಂಡೆ ಮೇಲ್ಮಟ್ಟ ಕಾಲುವೆ ವ್ಯಾಪ್ತಿಯ ಅಂದಾಜು 6174ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಲಾಗುತ್ತದೆ. ಕೆರೆ ಕೊಳವೆಬಾವಿ ಏತ ನೀರಾವರಿ ವಿಜಯನಗರ ಕಾಲುವೆ ತುಂಗಭದ್ರಾ ನದಿ ಪಾತ್ರದಲ್ಲಿ 8870 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ.

ನ್ಯಾನೋ ಯೂರಿಯಾ ಬಳಕೆಗೆ ರೈತರ ಹಿಂದೇಟು:

ಪೈರು ಚಿಕ್ಕದಾಗಿರುವಾಗ ನ್ಯಾನೊ ಯೂರಿಯಾ ಸಿಂಪರಣೆ ಮಾಡಿದರೆ ಸಮರ್ಪಕವಾಗಿ ತಲುಪುವುದಿಲ್ಲ. ಈ ಕಾರಣದಿಂದ ಆರಂಭದಲ್ಲಿಯೇ ಇದರ ಬಳಕೆಗೆ ರೈತರು ಹಿಂಜರಿಯುತ್ತಿದ್ದಾರೆ. ಸರಿಯಾದ ಮಾಹಿತಿಯ ಕೊರತೆ ಮತ್ತು ಅನುಮಾನಗಳು ರೈತ ವಲಯದಲ್ಲಿ ಇಂದಿಗೂ ಜೀವಂತವಾಗಿವೆ. ಕೃಷಿ ತಜ್ಞರು ಜಾಗೃತಿ ಮೂಡಿಸಿದಲ್ಲಿ ಅನ್ನದಾತರು ಹೆಚ್ಚಿನ ಒಲವು ತೋರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.