ಪ್ರಜಾವಾಣಿ ವಾರ್ತೆ
ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ವೈಮಾನಿಕ ವೀಕ್ಷಣೆ ಪರದೆ (ಎವಿಡಿ) ಅಳವಡಿಸಲಾಗಿದೆ.
ಈ ಡ್ಯಾಶ್ಬೋರ್ಡ್ ಮೂಲಕ ವಿಮಾನಗಳ ಲೈವ್ ಲೋಕೇಷನ್, ತುರ್ತು ಸಂದರ್ಭದ ಸಂದೇಶಗಳನ್ನು ಪ್ರಯಾಣಿಕರು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ಈ ವ್ಯವಸ್ಥೆಯು ವಿಮಾನ ಸಂಚಾರ, ವಾಯುಯಾನ ಪ್ರದೇಶದಲ್ಲಿ ವಾಹನಗಳ ಸಂಚಾರ ಸಮನ್ವಯ, ತುರ್ತು ಪರಿಸ್ಥಿತಿಯ ನಿರ್ವಹಣೆ ಸೇರಿದಂತೆ ಹಲವಾರು ಕಾರ್ಯಗಳ ಮೇಲ್ವಿಚಾರಣೆಗೆ ಕೇಂದ್ರೀಕೃತ ಡ್ಯಾಶ್ ಬೋರ್ಡ್ ನೆರವಾಗಲಿದೆ.
ವಿಮಾನ ನಿಲ್ದಾಣದ ನಿರ್ವಾಹಕರು, ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳಿಗೆ ವಾಯುಯಾನ ಪ್ರದೇಶದಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಏಕೀಕೃತ ನೋಟವನ್ನು ಈ ಪರದೆ ಒದಗಿಸುತ್ತದೆ. ಆ ಮೂಲಕ ವಿಮಾನ ಕಾರ್ಯಾಚರಣೆಯ ದಕ್ಷತೆ ಮತ್ತು ಸುರಕ್ಷತೆ ಹೆಚ್ಚಿಸಲು ನೆರವಾಗಲಿದೆ.
'ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ಸುರಕ್ಷತೆ, ದಕ್ಷತೆ ಮತ್ತು ಅತ್ಯುತ್ತಮ ಕಾರ್ಯಾಚರಣೆಗೆ ಅನುಕೂಲವಾಗುವಂತಹ ಅತ್ಯುನ್ನತ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಸದಾ ಮುಂಚೂಣಿಯಲ್ಲಿದೆ. ಹೊಸ ವೈಮಾನಿಕ ವೀಕ್ಷಣೆ ಬೋರ್ಡ್ ಅಳವಡಿಕೆ ಪ್ರಯಾಣಿಕರಿಗೆ ತಡೆರಹಿತ ಪ್ರಯಾಣದ ಅನುಭವ ನೀಡುತ್ತದೆ' ಎಂದು ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಸಿಇಓ ಸತ್ಯಕಿ ರಘುನಾಥ್ ತಿಳಿಸಿದ್ದಾರೆ.
Cut-off box - ಈ ಪರದೆ ವೈಶಿಷ್ಟ್ಯತೆ ಏನು? * ಏಕೀಕೃತ ಡ್ಯಾಶ್ಬೋರ್ಡ್: ವಿಮಾನದ ಲ್ಯಾಂಡಿಂಗ್ ಟೇಕ್ ಆಫ್ ಟ್ಯಾಕ್ಸಿ ಮತ್ತು ವಾಹನ ಸಂಚಾರ ಸೇರಿದಂತೆ ವಾಯುಯಾನ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ನೈಜ ಸಮಯದ ಸಮಗ್ರ ವಿವರ ಈ ಪರದೆಯಲ್ಲಿ ದೊರೆಯಲಿದೆ. * ಟ್ರ್ಯಾಕಿಂಗ್ ಸೌಲಭ್ಯ: ವಾಯುಯಾನ ಪ್ರದೇಶದಲ್ಲಿ ವಿಮಾನಗಳ ವೇಗ ರನ್ ವೇ ಬಳಕೆಯಲ್ಲಿರುವ ಸಮಯ ಮತ್ತು ಟ್ಯಾಕ್ಸಿ ಸಂಚಾರದ ನಿಖರ ಮೇಲ್ವಿಚಾರಣೆಗೆ ನೆರವು * ವಾಹನಗಳ ಮೇಲ್ವಿಚಾರಣೆ: ರನ್ ವೇಯಲ್ಲಿ ಸಂಚರಿಸುವ ವಿಮಾನೇತರ ವಾಹನಗಳ ಸಂಚಾರದ ಮೇಲೆ ಟ್ರ್ಯಾಕ್ ಮಾಡಬಹುದು * ಸಹಯೋಗ: ವಾಯುಯಾನ ಪ್ರದೇಶದ ಉತ್ತಮ ಕಾರ್ಯಾಚರಣೆ ಕಾರ್ಯನಿರ್ವಹಣೆಗೆ ಇತರ ಸಂಸ್ಥೆ ಮತ್ತು ತಂಡಗಳ ಸಹಯೋಗವನ್ನು ಬಲಗೊಳಿಸಲಿದೆ. * ತುರ್ತು ಎಚ್ಚರಿಕೆ: ತುರ್ತು ಸಂದರ್ಭಗಳಲ್ಲಿ ಇತರ ಸಂಸ್ಥೆ/ತಂಡಗಳ ಜೊತೆಗೆ ಉತ್ತಮ ಸಮನ್ವಯ ಸಾಧಿಸಲು ಮತ್ತು ಅಪಾಯ ಅಡೆತಡೆ ನಿವಾರಿಸಲು ತ್ವರಿತ ಪ್ರತಿಕ್ರಿಯೆ ಸೌಲಭ್ಯ ಒದಗಿಸುತ್ತದೆ. * ಸೂಕ್ತ ನಿರ್ವಹಣೆ: ಟ್ಯಾಕ್ಸಿ ಸಂಚಾರ ಸಮಯದ ವಿಳಂಬ ಕಡಿಮೆ ಮಾಡಲು ಮತ್ತು ಸುಗಮ ಕಾರ್ಯಾಚರಣೆ ಖಚಿತಪಡಿಸಲು ನಿಖರ ವಿಶ್ಲೇಷಣೆ ಒದಗಿಸುತ್ತದೆ. ಇದು ಸರಿಯಾದ ಸಮಯದ ಕಾರ್ಯಕ್ಷಮತೆ (ಒಟಿಪಿ) ಮತ್ತು ಇಂಧನ ಉಳಿತಾಯಕ್ಕೆ ಕಾರಣವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.