ಆನೇಕಲ್:ಹಿಂಡಿನಿಂದ ಬೇರ್ಪಟ್ಟ ಗಂಡಾನೆ ಮರಿಯೊಂದನ್ನು ಬನ್ನೇರುಘಟ್ಟ ಉದ್ಯಾನಕ್ಕೆ ತರಲಾಗಿದ್ದು, ಸಿಬ್ಬಂದಿಯು ಅದನ್ನು ಜತನದಿಂದ ಆರೈಕೆ ಮಾಡುತ್ತಿದ್ದಾರೆ.
ಕಾವೇರಿ ವನ್ಯಜೀವಿ ಅಭಯಾರಣ್ಯದ ಹಲಗೂರು ಅರಣ್ಯ ಪ್ರದೇಶದ ವ್ಯಾಪ್ತಿಯ ಮುತ್ತತ್ತಿ ಕಡೆಗೆ ಹೋಗುವ ದಾರಿಯಲ್ಲಿ ಗಂಡಾನೆ ಮರಿಯೊಂದು ಒಂಟಿಯಾಗಿ ಪತ್ತೆಯಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಇದನ್ನು ರಕ್ಷಿಸಿ ಎರಡು ದಿನಗಳ ಕಾಲ ಅಭಯಾರಣ್ಯದ ಆನೆಗಳ ಹಿಂಡಿನೊಂದಿಗೆ ಸೇರಿಸಲು ಪ್ರಯತ್ನ ನಡೆಸಿದ್ದರು.
ಆದರೆ, ಈ ಹಿಂಡುಗಳು ಮರಿಯನ್ನು ತಿರಸ್ಕರಿಸಿದ್ದರಿಂದ ಯಶಸ್ವಿಯಾಗಲಿಲ್ಲ. ಹಾಗಾಗಿ, ಮೂರ್ನಾಲ್ಕು ತಿಂಗಳ ವಯೋಮಾನದ ಮರಿಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತರಲಾಗಿದ್ದು, ಇಲ್ಲಿಯೇ ಆರೈಕೆ ಮಾಡಲಾಗುತ್ತಿದೆ.
ಮರಿಯಾನೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ವೈರಲ್ ಸೋಂಕಿನ ಬಗ್ಗೆ ತಪಾಸಣೆ ಮಾಡಲಾಗುತ್ತದೆ ಎಂದು ಉದ್ಯಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.