ದೊಡ್ಡಬಳ್ಳಾಪುರ: ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದವರನ್ನು ತಡೆಯಲು ಮುಂದಾದ ಯುವಕನನ್ನು ಹತ್ಯೆ ಮಾಡಿರುವ ಪ್ರಕರಣ ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಹತ್ಯೆಗೆ ಒಳಗಾದ ಯುವಕ ಮಂಜುನಾಥ್ (22) ಎಂಬಾತನ ಮನೆಯಲ್ಲಿ ತಾಯಿ, ಅಕ್ಕ ಮಾತ್ರ ವಾಸವಾಗಿದ್ದರು. ದಾಬಸ್ಪೇಟೆ-ದೊಡ್ಡಬಳ್ಳಾಪುರ ಹೆದ್ದಾರಿ ಪಕ್ಕದ ತೋಟದಲ್ಲಿನ ಮನೆಗೆ ರಾತ್ರಿ ಬಂದ ದುಷ್ಕರ್ಮಿಗಳ ತಂಡ ನೀರು ಕೇಳುವ ನೆಪದಲ್ಲಿ ಮನೆ ಬಾಗಿಲು ತೆಗೆಸಿ ರಾಡು, ಮಾರಕಾಸ್ತ್ರಗಳಿಂದ ಮಂಜುನಾಥ್ ಮೇಲೆ ಹಲ್ಲೆ ನಡೆಸಿದೆ. ಮಂಜುನಾಥ್ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಚಿಕಿತ್ಸೆಗೆ ತುಮಕೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯದಲ್ಲೆ ಮಂಜುನಾಥ್ ಮೃತಪಟ್ಟಿರುವುದಾಗಿ ಸಂಬಂಧಿಗಳು ಮಾಹಿತಿ ನೀಡಿದ್ದಾರೆ.
ಮಂಜುನಾಥ್ ಅವರ ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರವಾಹನವನ್ನು ದುಷ್ಕರ್ಮಿಗಳು ಕೊಂಡೊಯ್ದು ಮಧುರ ಹೊಸಹಳ್ಳಿ ಗ್ರಾಮದ ಸಮೀಪ ಬಿಟ್ಟು ಹೋಗಿದ್ದಾರೆ. ಮೃತನ ಮಂಜುನಾಥ್ ತಾಯಿ ಲಲಿತಮ್ಮ ನೀಡಿರುವ ದೂರನಂತೆ ದರೋಡೆ ಯತ್ನ,ಹಲ್ಲೆ ಅಡಿಯಲ್ಲಿ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ
ಗಳ ಪತ್ತೆಗೆ ಪೊಲೀಸರ ತಂಡ ರಚಿಸಿದ್ದಾರೆ. ಡಿವೈಎಸ್ಪಿ ಟಿ.ರಂಗಪ್ಪ, ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್.ಗೌಡ ಇತರರು
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.