ದೊಡ್ಡಬಳ್ಳಾಪುರ: ಚಾಲನಾ ಪರವಾನಗಿ ನವೀಕರಣ ಸಿಗದೆ ಕಳೆದ 28 ತಿಂಗಳಿಂದ ಬೇಸತ್ತ ಕಾರು ಚಾಲಕ ಎಂ.ಮುನೇಗೌಡ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ಚಾಲನ ಪರವಾನಗಿ ಪಡೆಯಲು ನಡೆಸಿರುವ ಪತ್ರ ವ್ಯವಹಾರದ ದಾಖಲಾತಿಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುನೇಗೌಡ, ‘20 ವರ್ಷಗಳಿಂದ ಚಾಲಕನಾಗಿ ಜೀವನ ನಿರ್ವಹಣೆ ಮಾಡಿಕೊಂಡಿದ್ದೆ. 28 ತಿಂಗಳ ಹಿಂದೆ ದೇವನಹಳ್ಳಿ ಆರ್ಟಿಒ ಕಚೇರಿಗೆ ಚಾಲನಾ ಪರವಾನಗಿ ನವೀರಣಕ್ಕೆ ಅರ್ಜಿ ಸಲ್ಲಿಸಿದ್ದೆ. ಆದರೆ ಮಧ್ಯವರ್ತಿಗಳ ಹಾವಳಿ, ಹಣದ ಬೇಡಿಕೆ ಹಿನ್ನೆಲೆಯಲ್ಲಿ ಈವರೆಗೆ ಡಿಎಲ್ ಕೈಸೇರಿಲ್ಲ’ ಎಂದು ತಮ್ಮ ಅಳಲು ತೋಡಿಕೊಂಡರು.
‘ಫೆಬ್ರವರಿ 2018ರಲ್ಲಿ ಅರ್ಜಿ ಸಲ್ಲಿಸಿದ್ದೆ. 1 ತಿಂಗಳಲ್ಲಿ ಹೊಸ ಡಿಎಲ್ ಬರಬೇಕಿತ್ತು. ಡಿಎಲ್ ಬಾರದೆ ಇದ್ದಾಗ ಕಚೇರಿಗೆ ಹೋಗಿ ವಿಚಾರಿಸಿದೆ. ಒಂದೆರಡು ಬಾರಿ ಅಲೆದ ನಂತರ ದೊಡ್ಡಬಳ್ಳಾಪುರದ ಮಧ್ಯವರ್ತಿಯೊಬ್ಬರ ಬಳಿ ನಿಮ್ಮ ಡಿಎಲ್ ಇದೆ ಅಲ್ಲಿ ಪಡೆಯಿರಿ’ ಎಂದು ಆರ್ಟಿಒ ಅಧಿಕಾರಿಗಳು ಹೇಳಿದರು.
‘ಮಧ್ಯವರ್ತಿಗಳ ಬಳಿ ಹೋದಾಗ ನಿರ್ದಿಷ್ಟ ಮೊತ್ತ ಪಾವತಿಗೆ ಸೂಚಿಸಿದರು. ಆದರೆ ನೇರ ಅರ್ಜಿ ಸಲ್ಲಿಸಿರುವ ನನಗೆ ನೇರವಾಗಿ ಇಲಾಖೆ ಡಿಎಲ್ ನೀಡಬೇಕು ಎಂಬುದನ್ನು ಮುಂದಿಟ್ಟು ಹೋರಾಟ ನಡೆಸಿದ್ದೇನೆ. ಸಾರಿಗೆ ಆಯುಕ್ತರಿಂದ ಹಿಡಿದು ಮುಖ್ಯಮಂತ್ರಿಗೂ ದೂರು ಸಲ್ಲಿಸಿದ್ದೇನೆ. ರಾಷ್ಟ್ರಪತಿಗೆ ಪತ್ರ ತಲುಪಿದೆ. ಅವರು ನ್ಯಾಯ ನೀಡುತ್ತಾರೆಂಬ ವಿಶ್ವಾಸವಿದೆ. ಇಲ್ಲದಿದ್ದರೆ ದಯಾಮರಣಕ್ಕೆ ಮೊರೆಯಿಡುವಂತಾಗಲಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.