ವಿಜಯಪುರ: ಇಲ್ಲಿನ ಹಾರೋಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹೊಲೇರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿಗಳ ಕೈ ಚಳಕದಿಂದ ಬಗೆ ಬಗೆಯ ಕಲಾಕೃತಿಗಳೊಂದಿಗೆ ಕಂಗೊಳಿಸುತ್ತಿವೆ.
ಅನೇಕ ವರ್ಷಗಳಿಂದ ಸುಣ್ಣ–ಬಣ್ಣ ಕಾಣದ ಶಾಲಾ ಕಟ್ಟಡಗಳಿಗೆಬೆಂಗಳೂರಿನ ಚಿತ್ರಕಲಾ ಪರಿಷತ್ತು, ಮೈಸೂರಿನ ಕಾವಾ ಕಲಾನಿಕೇತನ, ರವಿವರ್ಮ ಚಿತ್ರಕಲಾ ಪರಿಷತ್ತು, ಆಚಾರ್ಯ ಕಾಲೇಜು, ಎಂ.ಎಸ್.ರಾಮಯ್ಯ ಕಾಲೇಜಿನ ಸ್ವಯಂ ಸೇವಕರು, 50ಕ್ಕೂ ಹೆಚ್ಚು ಸ್ಥಳೀಯ ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಬಣ್ಣ ಬಳಿದು, ಮಕ್ಕಳ ಕಲಿಕೆಗೆ ಪೂರಕವಾಗಿರುವ ಚಿತ್ರ ಬಿಡಿಸುವ ಮೂಲಕ ಶಾಲೆಗಳಿಗೆ ಹೊಸರೂಪ ಕೊಟ್ಟಿದ್ದಾರೆ.
ಶಾಲಾ ಗೋಡೆಗಳ ಮೇಲೆ ರಾಷ್ಟ್ರದ್ವಜ, ರಾಷ್ಟ್ರೀಯ ಮರ, ರಾಷ್ಟ್ರಪಕ್ಷಿ, ರಾಷ್ಟ್ರೀಯ ಪ್ರಾಣಿ, ರಾಷ್ಟ್ರೀಯ ಕ್ರೀಡೆ, ಸೌರವ್ಯೂಹ, ಚಂದ್ರಯಾನ-2, ಬಂಡೀಪುರ ಅರಣ್ಯ, ಮೂತ್ರಪಿಂಡಗಳ ಕಾರ್ಯ ನಿರ್ವಹಣೆ, ಶಾಲಾ ಮುಂಭಾಗದ ತೋಟ, ಮಾನವನ ಹೃದಯ ಹಾಗೂ ದೇಹದ ರಚನೆ, ಭಾರತ ಮತ್ತು ಕರ್ನಾಟಕದ ನಕ್ಷೆ, ವಿಜ್ಞಾನ ಪ್ರಯೋಗದ ಮಾದರಿ, ಗಣಿತ ಮಾದರಿ, ಸೂತ್ರಗಳು, ದೇಶೀಯ ಆಟ, ಗ್ರಾಮದ ಪುರಾತನ ನೃತ್ಯಗಳ ಶೈಲಿ, ಪ್ರಕೃತಿಯಲ್ಲಿನ ವಿವಿಧ ಪ್ರಾಣಿಗಳ ಜೀವನ, ವನ್ಯಜೀವಿಗಳ ಪರಿಚಯ, ಸಂಗೀತ ವಾದ್ಯಗಳು, ನೀರಿನ ಸಂರಕ್ಷಣೆ, ಸ್ವಚ್ಚ ಭಾರತ್ ಮಿಷನ್ ಅಡಿ ಶೌಚಾಲಯಗಳ ನಿರ್ಮಾಣ, ಕೃಷಿ, ತೋಟಗಾರಿಕೆ, ಜಾನಪದ ನೃತ್ಯ ಸೇರಿದಂತೆ ಶಾಲೆಯಲ್ಲಿನ ಪ್ರತಿಯೊಂದು ಕೊಠಡಿಯಲ್ಲಿ ಮಕ್ಕಳ ಕಲಿಕೆಗೆ ಪೂರಕ ಮಾಹಿತಿ ನೀಡುವ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಮಾತ್ರವಲ್ಲ ಪರಿಸರ, ವನ್ಯಜೀವಿಗಳ ಸಂರಕ್ಷಣೆ, ಮಣ್ಣಿನ ಸವೆತದಿಂದ ಉಂಟಾಗುವ ದುಷ್ಪರಿಣಾಮಗಳು, ಕಾರ್ಖಾನೆಗಳಿಂದ ಹೊರಬರುವ ವಿಷಾನಿಲಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಚಿತ್ರಕಲೆಯ ಮೂಲಕ ಮಾಹಿತಿ ಒದಗಿಸುವಂತಹ ಕೆಲಸ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.