ಸೂಲಿಬೆಲೆ: ‘ಶಿಕ್ಷಣ ಪಡೆದಿರುವ ಹಾಗೂ ಪಡೆಯುತ್ತಿರುವ ಯುವ ಉದ್ಯೋಗ ಆಕಾಂಕ್ಷಿಗಳಿಗೆ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಉಚಿತ ಕೌಶಲ ತರಬೇತಿ ನೀಡಲಾಗುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎ.ಭೂಶಂಕರ್ ತಿಳಿಸಿದರು.
ಇಲ್ಲಿನ ಅದ್ವೈತ ಫೌಂಡೇಷನ್ ತರಬೇತಿ ಸಂಸ್ಥೆಯಲ್ಲಿ ಕೌಶಲಾಭಿವೃದ್ಧಿ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪಾರದರ್ಶಕತೆ ಕಾಪಾಡಿಕೊಳ್ಳುವ ಸಲುವಾಗಿ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಎಲ್ಲ ರೀತಿಯ ಸೌಲಭ್ಯ ಹೊಂದಿರುವ ತರಬೇತಿ ಕೇಂದ್ರಗಳಿಗೆ ಮಾತ್ರ ಇಲಾಖೆ ತರಬೇತಿ ನೀಡುವ ಅವಕಾಶ ಒದಗಿಸಿದೆ. ಇಲಾಖೆಯ ಉದ್ದೇಶ ಕೌಶಲವನ್ನು ಅಭಿವೃದ್ಧಿಪಡಿಸುವುದಾಗಿದೆ. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಕಂಪನಿ ಹಾಗೂ ಕೈಗಾರಿಕಾ ಕ್ಷೇತ್ರಗಳಿಗೆ ಬೇಕಾದ ರೀತಿಯಲ್ಲಿ ವಿದ್ಯಾವಂತರಿಗೆ ಕೌಶಲ ತರಬೇತಿ ನೀಡಿ ಸ್ವಯಂ ಉದ್ಯೋಗಿಗಳಾಗಲು ಅಥವಾ ಉದ್ಯೋಗವಂತರನ್ನಾಗಿ ಮಾಡುವ ಉದ್ದೇಶ ಇಲಾಖೆ ಹೊಂದಿದೆ’ ಎಂದರು.
‘ಯುವಕೌಶಲ ಕಾರ್ಯಕ್ರವನ್ನು ಸಹ ಇಲಾಖೆ ಹಮ್ಮಿಕೊಂಡಿದ್ದು, ಸಂದರ್ಶನ ಎದುರಿಸಲು ತರಬೇತಿ ಸೇರಿದಂತೆ ಇನ್ನಿತರ ಕೌಶಲಗಳ ಬಗ್ಗೆ ತರಬೇತಿ ನೀಡಲಾಗುವುದು. ಇಲಾಖೆಯ kaushalya.kar ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.
ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಸಿ.ನಾರಾಯಣಸ್ವಾಮಿ ಮಾತನಾಡಿ, ‘ಉದ್ಯೋಗ ಅವಕಾಶಗಳು ಹೇರಳವಾಗಿದ್ದು, ವಿದ್ಯಾವಂತ ಯುವಜನರು ಶಿಕ್ಷಣದ ಜತೆಗೆ ಉದ್ಯೋಗಕ್ಕೆ ಬೇಕಾದ ಕೌಶಲ ಪಡೆದುಕೊಳ್ಳಬೇಕು. ಹಾಗಾದಾಗ ಸುಲಭವಾಗಿಉದ್ಯೊಗಗಳಿಸಿಬಹುದು’ ಎಂದರು.
ಹೊಸಕೋಟೆ ಕೈಟ್ ಕಾಲೇಜು ಪ್ರಾಂಶುಪಾಲ ಮನೋಹರ್ ಮಾತನಾಡಿದರು.
ಅದ್ವೈತ ಫೌಂಡೇಷನ್ ಕಾರ್ಯದರ್ಶಿ ಮಹಾಂತ್, ಅಧ್ಯಕ್ಷೆ ನವ್ಯ, ಗ್ರಂಥಪಾಲಕ ಡಾ.ನವೀದ್, ಹರೀಶ್ ಬಾಬು, ಸಾಮಾನ್ಯ ಸೇವಾ ಕೇಂದ್ರ ಜಿಲ್ಲಾ ಸಂಯೋಜಕ ಪ್ರಜ್ವಲ್ ಹಾಗೂ ಅಭ್ಯರ್ಥಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.