ಸಾಂದರ್ಭಿಕ ಚಿತ್ರ
ಆನೇಕಲ್: ಬೆಂಗಳೂರಿನ ಲಾಲ್ಬಾಗ್ ಬಳಿಯ ತೋಟದ ಬೆಳೆಗಾರರ ಸಹಕಾರ ಮತ್ತು ಸಂಸ್ಕರಣ ಸಂಘದಲ್ಲಿ (ಹಾಪ್ಕಾಮ್ಸ್) ನಡೆದಿರುವ ಅವ್ಯವಹಾರ ಮತ್ತು ನಿಯಮಬಾಹಿರ ಸದಸ್ಯರ ಸೇರ್ಪಡೆಗೆ ಸಂಬಂಧಿಸಿದಂತೆ ಹಾಪ್ಕಾಮ್ಸ್ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ 10 ನಿರ್ದೇಶಕರನ್ನು ಅನರ್ಹಗೊಳಿಸಲಾಗಿದೆ.
ಹಾಪ್ಕಾಮ್ಸ್ ಅಧ್ಯಕ್ಷೆ ಎಚ್.ಕೆ.ನಾಗವೇಣಿ, ಉಪಾಧ್ಯಕ್ಷ ಎ.ಎಸ್.ಚಂದ್ರೇಗೌಡ, ನಿರ್ದೇಶಕರಾದ ಎನ್.ದೇವರಾಜು, ವಸಂತಕುಮಾರ್, ಸೊಣ್ಣಪ್ಪ, ಪ್ರಕಾಶ್, ಸಂಪಂಗಿರಾಮಯ್ಯ, ಗೋಪಾಲಕೃಷ್ಣ ಬಿ., ಮುನೇಗೌಡ ಅವರನ್ನು ಅನರ್ಹಗೊಳಿಸಿ ಸಹಕಾರ ಸಂಘಗಳ ಜಂಟಿ ನಿಬಂಧಕ ಅಶ್ವತ್ಥನಾರಾಯಣ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 29ಸಿ(8)(ಬಿ)(ಸಿ) ಮತ್ತು (ಡಿ) ಅನ್ವಯ ಅನರ್ಹಗೊಳಿಸಲಾಗಿದೆ. ಮುಂದಿನ ಐದು ವರ್ಷ ಯಾವುದೇ ಸಹಕಾರ ಸಂಘದ ನಿರ್ದೇಶಕರಾಗದಂತೆ ಅನರ್ಹಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ನಿಯಮ ಬಾಹಿರವಾಗಿ ಹೊಸ ಸದಸ್ಯರನ್ನು ಸೇರಿಸಿರುವುದು, ಸದಸ್ಯತ್ವ ಅರ್ಜಿಯ ಜೊತೆಗೆ ನೀಡಬೇಕಾದ ಪಹಣಿ ಮತ್ತು ಇತರೆ ದಾಖಲೆಗಳನ್ನು ಪಡೆಯದಿರುವ ಆರೋಪ ಮೇಲೆ ಈ ಕ್ರಮ ಜರುಗಿಸಲಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.