
ದೇವನಹಳ್ಳಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಂಬೋಡಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಥ್ರೋಬಾಲ್ ಸ್ಪರ್ಧೆಯಲ್ಲಿ ಜಯ ಸಾಧಿಸಿ ತವರಿಗೆ ಮರಳಿದ ಭಾರತೀಯ ತಂಡವನ್ನು ಸ್ವಾಗತಿಸಿ ಅಭಿನಂದಿಸಲಾಯಿತು
ದೇವನಹಳ್ಳಿ: ಕಾಂಬೋಡಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಥ್ರೋಬಾಲ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತೀಯ ತಂಡಕ್ಕೆ ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು.
ಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ನಡೆದ ಕಠಿಣ ಪೈಪೋಟಿಯಲ್ಲಿ ಭಾರತ ತಂಡ ಜಯ ಸಾಧಿಸಿ ಕಪ್ ಗೆದ್ದುಕೊಂಡಿತು. ಟ್ರೋಫಿ ಗೆದ್ದು ತವರಿಗೆ ಮರಳಿದ ತಂಡದಲ್ಲಿ ಭಾಗವಹಿಸಿದ್ದ ಎಂಡೀವರ್ಸ್ ಶಾಲೆ ವಿದ್ಯಾರ್ಥಿಗಳಾದ ಅಕ್ಷಯ್ ಮತ್ತು ಚಂದನ್ ರೆಡ್ಡಿ ಸೇರಿದಂತೆ ಇಡೀ ತಂಡವನ್ನು ಪೋಷಕರು, ಶಾಲಾ ಆಡಳಿತ ಮಂಡಳಿ ಮತ್ತು ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡರು.
ವಿಜೇತ ಕ್ರೀಡಾಪಟುಗಳನ್ನು ಶಾಲೆ ಅಧ್ಯಕ್ಷ ಎಂ.ಎಲ್.ಶಿವಶಂಕರ್ ಅಭಿನಂದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶಕ್ಕೆ ಗೌರವ ತಂದ ಕ್ರೀಡಾಪಟುಗಳ ಸಾಧನೆ ಶ್ಲಾಘನೀಯವಾಗಿದೆ. ವಿಶೇಷವಾಗಿ ಶಾಲೆ ವಿದ್ಯಾರ್ಥಿಗಳು ಮತ್ತು ಮಹಿಳಾ ತಂಡದ ತರಬೇತುದಾರರು ಭಾಗವಹಿಸಿ ಟ್ರೋಫಿ ಗೆದ್ದಿರುವುದು ಹೆಮ್ಮೆಯ ವಿಷಯ. ಈ ಸಾಧನೆ ದೇಶ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದೆ ಎಂದು ಹೇಳಿದರು.
ಶಾಲೆಯ ಕ್ರೀಡಾಪಟುಗಳಿಗೆ ಮುಂದಿನ ದಿನಗಳಲ್ಲಿ ಅಗತ್ಯವಿರುವ ಎಲ್ಲ ರೀತಿಯ ಪ್ರೋತ್ಸಾಹ ಮತ್ತು ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.