ಆನೇಕಲ್ : ತಾಲ್ಲೂಕಿನ ಅತ್ತಿಬೆಲೆ ಪುರಸಭೆಯ ಅಧ್ಯಕ್ಷರಾಗಿ ಬಿಜೆಪಿಯ ಜಯಲಕ್ಷ್ಮೀ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನ್ಯಾಯಾಲಯದಲ್ಲಿ ಪ್ರಕರಣಗಳಿದ್ದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಅತ್ತಿಬೆಲೆ ಪುರಸಭೆಗೆ ಅಧ್ಯಕ್ಷರ ನೇಮಕವಾಗಿರಲಿಲ್ಲ. ಪ್ರಕರಣ ಇತ್ಯರ್ಥವಾಗಿದ್ದು, ಸೋಮವಾರ ಚುನಾವಣೆ ನಿಗದಿಯಾಗಿತ್ತು. ಜಯಲಕ್ಷ್ಮೀ ವೆಂಕಟೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಸಿ.ಮಹಾದೇವಯ್ಯ ಘೋಷಿಸಿದರು.
ಅತ್ತಿಬೆಲೆ ಪುರಸಭೆಯಲ್ಲಿ 23 ಸದಸ್ಯರಿದ್ದು 14 ಬಿಜೆಪಿ, 8 ಕಾಂಗ್ರೆಸ್ ಮತ್ತು ಒಬ್ಬ ಜೆಡಿಎಸ್ ಸದಸ್ಯರಿದ್ದಾರೆ. ಬಹುಮತವಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾದರು.
ಜಯಲಕ್ಷ್ಮೀ ವೆಂಕಟೇಶ್ ಮಾತನಾಡಿ ಗ್ರಾಮ ಪಂಚಾಯಿತಿ ಮೇಲ್ದರ್ಜೇಗೇರಿ ಪುರಸಭೆಯಾದ ಅತ್ತಿಬೆಲೆಯಲ್ಲಿ ಮೊದಲ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಾಗಿದೆ. ಹಲವು ಸವಾಲುಗಳು ಇಲ್ಲಿವೆ. ಇವುಗಳನ್ನು ಎಲ್ಲರ ಸಹಕಾರ ಪಡೆದು ಸಮರ್ಥವಾಗಿ ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ಕಸದ ಸಮಸ್ಯೆ, ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ ಸೇರಿದಂತೆ ಹಲವು ಕಾರ್ಯಗಳನ್ನು ಮಾಡಬೇಕಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಹಾಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದು ಅತ್ತಿಬೆಲೆ ಪುರಸಭೆಯನ್ನು ಮಾದರಿ ಪುರಸಭೆಯಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.
ನೂತನ ಅಧ್ಯಕ್ಷೆಯನ್ನು ಅತ್ತಿಬೆಲೆ ಪುರಸಭಾ ಉಪಾಧ್ಯಕ್ಷ ಮಂಜುಳ ಸೋನಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ವಿ.ಶಿವಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಡಾಪುರ ರಾಮಚಂದ್ರ, ಎಂ.ಟಿ.ನಾರಾಯಣ್, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಬಿ.ವೈ.ರಮೇಶ್, ಮುಖಂಡರಾದ ಎನ್.ಬಸವರಾಜು, ಗಣೇಶ್, ಪಂಡಿತಾನಗ್ರಹಾರ ಆಂಜಿನಪ್ಪ, ರಾಘವೇಂದ್ರ, ಬಿ.ಜಿ.ಆಂಜಿನಪ್ಪ, ಪಟಾಪಟ್ ಶ್ರೀನಿವಾಸ್, ಮಂಜುನಾಥ್ ದೇವ, ಪಟಾಪಟ್ ರವಿ, ಕಿತ್ತಗಾನಹಳ್ಳಿ ಹರೀಶ್, ಬಳ್ಳೂರು ವಸಂತ್, ಸುಲೋಚನಾ ಅಭಿನಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.