
ಹೊಸಕೋಟೆ: ನಗರದಲ್ಲಿ ಸೋಮವಾರ ನಡೆದ ಪೈನಲ್ ಪಂದ್ಯಾವಳಿಯಲ್ಲಿ ಹೊಸಕೋಟೆ ತಂಡವನ್ನು ಮಣಿಸಿ ಕೊಳತೂರು ತಂಡವು ಎಸ್ಬಿಜಿ ಕಪ್ ಮತ್ತು ₹3 ಲಕ್ಷ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಈ ಮೂಲಕ ಕಳೆದೊಂದು ವಾರದಿಂದ ಪೂಜೆನಾ ಅಗ್ರಹಾರ ಮತ್ತು ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಶರತ್ ಬಚ್ಚೇಗೌಡ(ಎಸ್ಬಿಜಿ) ಕ್ರಿಕೆಟ್ ಪಂದ್ಯಾವಳಿ ಮುಕ್ತಾಯಗೊಂಡಿದೆ.
ರನ್ನರ್ಅಪ್ ಆದ ಹೊಸಕೋಟೆ ತಂಡಕ್ಕೆ ₹1.5 ಲಕ್ಷ ನಗದಿ ಮತ್ತು ಟ್ರೋಪಿ, ಮೂರನೇ ಸ್ಥಾನ ಪಡೆದ ದೇವಲಾಪುರ ತಂಡಕ್ಕೆ ₹75, ನಾಲ್ಕನೇ ಸ್ಥಾನ ಪಡೆದ ಕೊರಳೂರು ತಂಡಕ್ಕೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಎಸ್ಬಿಜಿ ಕಪ್ ಟೂರ್ನಿಯಲ್ಲಿ ಸರಣಿಶ್ರೇಷ್ಠ ಆಟಗಾರನಾಗಿ ಹೊಸಕೋಟೆಯ ಗೌತಮ್ ಹಾಗೂ ಪಂದ್ಯಶ್ರೇಷ್ಠ ಬಹುಮಾನವನ್ನು ಕೊಳತೂರು ತಂಡದ ಮಿಥುನ್ ಪಡೆದುಕೊಂಡರು. ಟೂರ್ನಿಯಲ್ಲಿ ತಾಲ್ಲೂಕಿನ 68 ತಂಡಗಳು ಭಾಗವಹಿಸಿದ್ದವು.
ವಿಜೇತ ತಂಡಕ್ಕೆ ಶಾಸಕ ಶರತ್ ಬಚ್ಚೇಗೌಡ ಕಪ್ ಮತ್ತು ನಗದು ಬಹುಮಾನ ವಿತರಿಸಿದರು.
ಬಮುಲ್ ನಿರ್ದೇಶಕ ಬಿ.ವಿ.ಸತೀಶ್ಗೌಡ, ಬಿ.ವಿ.ಬೈರೇಗೌಡ, ಎಸ್ಬಿಜಿ ತಂಡದ ಸಂಚಾಲಕಿ ಪ್ರತಿಭಾ ಶರತ್ ಬಚ್ಚೇಗೌಡ, ಕೇಶವ್ ಮೂರ್ತಿ, ಡಾ.ಎಚ್.ಎಂ.ಸುಬ್ಬರಾಜ್, ಕೊರಳೂರು ಕೆ.ಸಿ.ಸುರೇಶ್ ಗೌಡ ಇದ್ದರು.
ಅಪರಾಧ ಮುಕ್ತ ತಾಲ್ಲೂಕಿಗೆ ಪಣ
ತಾಲ್ಲೂಕನ್ನು ಅಪರಾಧ ಮತ್ತು ಎಫ್ಐಆರ್ ಮುಕ್ತಗೊಳಿಸುವ ಗುರಿ ಹೊಂದಲಾಗಿದ್ದು ಇದಕ್ಕಾಗಿ ಯುವಕರ ಗಮನವನ್ನು ಕ್ರೀಡೆಯತ್ತ ಕೇಂದ್ರೀಕರಿಸಲು ಕ್ರೀಡೆಗಳನ್ನು ಆಯೊಜಿಸಲಾಗುವುದು. ಧಾರ್ಮಿಕ ಸಾಮಾಜಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಅವರನ್ನು ತೊಡಿಗಿಸಿಕೊಳ್ಳುವಂತೆ ಮಾಡುವ ಮೂಲಕ ತಾಲ್ಲೂಕಿನಲ್ಲಿ ಶಾಂತಿ ನೆಮ್ಮದಿ ಕಾಪಾಡುವ ಮೊದಲ ಹೆಜ್ಜೆಯೇ ಎಸ್ಬಿಜಿ ಕ್ರಿಕೆಟ್ ಟೂರ್ನಿ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲ್ಲೂಕಿನಲ್ಲಿ ದ್ವೇಷ ಮುಕ್ತ ಸಮಾಜ ನಿರ್ಮಿಸುವ ಭಾಗವಾಗಿ ಇಂತಹ ಮತ್ತಷ್ಟು ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು. ಜೊತೆಗೆ ಶಾಶ್ವತ ಅಭಿವೃದ್ಧಿಗಳತ್ತ ಹೆಚ್ಚಿನ ಗಮನ ಹರಿಸಿ ಯುವಕರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ.-ಶರತ್ ಬಚ್ಚೇಗೌಡ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.