ದೊಡ್ಡಬಳ್ಳಾಪುರ: ಯುವ ಸಮುದಾಯ ತಮ್ಮ ಬದುಕು ರೂಪಿಸಿಕೊಳ್ಳುವ ಸಮಯದಲ್ಲಿ ಮಾದಕ ವ್ಯಸನಿಗಳಾದರೆ ಜೀವನ ಅಂಧಕಾರದಲ್ಲಿ ಮುಳುಗಲಿದೆ. ಅಲ್ಲದೆ ದೇಶದ ಪ್ರಗತಿಗೂ ಮಾರಕವಾಗಲಿದೆ ಎಂದು ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ಬಿ.ನವೀನ್ಕುಮಾರ್ ಹೇಳಿದರು.
ತಾಲ್ಲೂಕಿನ ಅಂತರಹಳ್ಳಿಯಲ್ಲಿ ಬೆಂಗಳೂರಿನ ಜಿಕೆವಿಕೆ ತೋಟಗಾರಿಕಾ ಮಹಾವಿದ್ಯಾಲಯದಿಂದ ನಡೆಯುತ್ತಿರುವ ವಾರ್ಷಿಕ ಎನ್ಎಸ್ಎಸ್ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತುಗಳ ಸೇವೆನೆಗೆ ದಾಸರಾಗುವುದರಿಂದ ವೈಯಕ್ತಿಕ ಜೀವನ ಹಾಗೂ ದೇಶದ ಪ್ರಗತಿಗೂ ಮಾರಕವಾಗಲಿದೆ. ಯುವ ಸಮುದಾಯವನ್ನು ಮಾದಕವ್ಯಸನದಿಂದ ದೂರ ಇರುವಂತೆ ಮಾಡಲು ಸರ್ಕಾರ ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳು ಸಾಕಷ್ಟು ಪರಿಶ್ರಮವಹಿಸಿ ಕೆಲಸ ಮಾಡುತ್ತಿವೆ. ಆದರೆ ಕಾಲೇಜು ಹಂತದ ವಿದ್ಯಾರ್ಥಿ ದಿಸೆಯಿಂದಲೇ ಈ ಜಾಗೃತರಾಗಬೇಕು ಎಂದು ತಿಳಿಸಿದರು.
ತಮಗೆ ಅರಿವಿಲ್ಲದೆಯೂ ಸಹ ಸ್ನೇಹಿತರ ಸಹವಾಸದಿಂದಲೂ ಮಾದಕಸೇವೆಗೆ ಒಳಗಾಗುವ ಅಪಾಯಾ ಇರುತ್ತವೆ. ಈ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದರು.
ದೇಶದ ಆರ್ಥಿಕತೆ ಬೆಳವಣಿಗೆಯಲ್ಲಿ ಹಾಗೂ ಜನರ ಆರೋಗ್ಯದಲ್ಲಿ ತೋಟಗಾರಿಕಾ ಬೆಳೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಈ ನಿಟ್ಟಿನಲ್ಲಿ ಆಧುನಿಕ ವಿಧಾನ ಅಳವಡಿಕೆಯ ಮೂಲಕ ತೋಟಗಾರಿಕಾ ಕ್ಷೇತ್ರ ಮತ್ತಷ್ಟು ಬೆಳೆಯಲು ಹಾಗೂ ರೈತರು ಆರ್ಥಿಕವಾಗಿ ಸದೃಢರಾಗಲು ಅಗತ್ಯ ಇರುವ ತಂತ್ರಜ್ಞಾನವನ್ನು ಹಳ್ಳಿಗಳಿಗೆ ತಲುಪಿಸುವ ಕೆಲಸವನ್ನು ತೋಟಗಾರಿಕಾ ಪದವಿಧರ ವಿದ್ಯಾರ್ಥಿಗಳು ಮಾಡಬೇಕಿದೆ. ಪ್ರಯೋಗಾಲಯದಿಂದ ರೈತರ ತೋಟಗಳಿಗೆ ಹೊಸ ಕೃಷಿ ಸಂಶೋಧನೆ ತಲುಪಬೇಕು ಎಂದು ಹೇಳಿದರು.
ಕಾಲೇಜಿನ ಡೀನ್ ಡಾ.ಜಿ.ಎಸ್.ಕೆ.ಸ್ವಾಮಿ, ಕಂಟನಕುಂಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮಚಂದ್ರರೆಡ್ಡಿ, ಸದಸ್ಯ ಗವಿಸಿದ್ದಯ್ಯ, ಶಿಬಿರಾಧಿಕಾರಿ ಡಾ.ಡಿ.ಎಸ್.ಅಂಬಿಕಾ, ಡಾ.ಆರ್.ಹನುಮಂತಯ್ಯ, ಡಾ.ಜಿ.ಕೆ.ಸೀತಾರಾಮು, ಡಾ.ವೆಂಕಟರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.