ADVERTISEMENT

ಜಲಮೂಲ ಸಂರಕ್ಷಣೆಗೆ ಇಲಾಖೆಗಳ ಸಹಭಾಗಿತ್ವ 

​ಪ್ರಜಾವಾಣಿ ವಾರ್ತೆ
Published 13 ಮೇ 2019, 13:44 IST
Last Updated 13 ಮೇ 2019, 13:44 IST
ಕೆರೆ ಪರಿಶೀಲಿಸಿದ ಜಿಲ್ಲಾಧಿಕಾರಿ ಕರೀಗೌಡ ತಂಡದ ಸದಸ್ಯರು 
ಕೆರೆ ಪರಿಶೀಲಿಸಿದ ಜಿಲ್ಲಾಧಿಕಾರಿ ಕರೀಗೌಡ ತಂಡದ ಸದಸ್ಯರು    

ದೇವನಹಳ್ಳಿ: ‘ಅಳಿವಿನಂಚಿನಲ್ಲಿರುವ ಕೆರೆಗಳನ್ನು ಮೂಲ ಸ್ವರೂಪ ಪಡೆದು ಜಲ ಸಂರಕ್ಷಣೆ ಮಾಡಲು ಸ್ಥಳೀಯರೊಂದಿಗೆ ವಿವಿಧ ಇಲಾಖೆಗಳು ಸಹಭಾಗಿತ್ವ ವಹಿಸಿದರೆ ಒಳ್ಳೆಯದು' ಎಂದು ಜಿಲ್ಲಾಧಿಕಾರಿ ಸಿ.ಎಸ್. ಕರೀಗೌಡ ಹೇಳಿದರು.

ಇಲ್ಲಿನ ಕೊಯಿರಾ ಕೆರೆಯಲ್ಲಿ ಸ್ಥಳೀಯ ಗ್ರಾಮಸ್ಥರಿಂದ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ಕೆರೆಗಳು ಅಭಿವೃದ್ಧಿಯಾದರೆ ಮಾತ್ರ ಗ್ರಾಮಗಳ ಅಭಿವೃದ್ಧಿ, ಬತ್ತಿ ಹೋಗಿರುವ ಕೆರೆಗಳು ಪುನಶ್ಚೇತನ ಮಾಡಲೇಬೇಕಾದ ಅನಿರ್ವಾಯತೆ ಇದೆ. ಇಲ್ಲದಿದ್ದರೆ ಉಳಿಗಾಲವಿಲ್ಲ, ಪ್ರತಿ ಕ್ರಿಮಿ, ಕೀಟ, ಪ್ರಾಣಿ, ಪಕ್ಷಿ ಸೇರಿದಂತೆ ಪ್ರತಿಯೊಂದು ಜೀವರಾಶಿಗೆ ನೀರು ಬೇಕು. ಒಂದು ಕಡ್ಡಿ ಹುಲ್ಲು ಬೆಳೆಯಲು ನೀರು ಬೇಕು. ಕೆರೆ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸಪಟ್ ಮಾತನಾಡಿ, ಜಿಲ್ಲೆಯಲ್ಲಿ ಹಲವು ಕೆರೆಗಳನ್ನು ಸ್ಥಳೀಯರು ಅಭಿವೃದ್ಧಿ ಪಡಿಸುತ್ತಿರುವುದು ಉತ್ತಮ ಬೆಳವಣಿಗೆ. ಜಿಲ್ಲಾಧಿಕಾರಿ ಕರೀಗೌಡರ ಕೆರೆ ಅಭಿವೃದ್ಧಿ ಯಾನಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇದಕ್ಕೆ ‘ಪ್ರಜಾವಾಣಿ’ ಸಂಪೂರ್ಣ ಜಾಗೃತಿ ಮೂಲಕ ಸಹಕಾರ ನೀಡುತ್ತಿದೆ ಎಂದು ಹೇಳಿದರು.

ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನು ಕರೆಯಿಸಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆಸಿ ಕೆರೆ ಅಭಿವೃದ್ಧಿಗೆ ಯಾವ ರೀತಿ ಸಹಕಾರ ನೀಡಬಹುದು ಎಂಬುದರ ಬಗ್ಗೆ ಚರ್ಚಿಸಿ ಕೆರೆ ಅಭಿವೃದ್ಧಿ ಪ್ರಯತ್ನಕ್ಕೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಹೇಳಿದರು.

ಡಿವೈಎಸ್ಪಿ ಮೋಹನ್, ಸರ್ಕಲ್‌ ಇನ್‌ಸ್ಪೆಕ್ಟರ್‌ ಪ್ರಕಾಶ್, ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.