ಏರ್ ಇಂಡಿಯಾ ವಿಮಾನ
ದೇವನಹಳ್ಳಿ (ಬೆಂ.ಗ್ರಾಮಾಂತರ ಜಿಲ್ಲೆ): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೋಮವಾರ ಬೆಳಗ್ಗೆ ವಾರಾಣಸಿಗೆ ಹೋರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಶೌಚಾಲಯವೆಂದು ತಪ್ಪಾಗಿ ಭಾವಿಸಿ ಕಾಕ್ಪಿಟ್ (ಪೈಲಟ್ ಕ್ಯಾಬಿನ್) ಪ್ರವೇಶಿಸಲು ಯತ್ನಿಸಿದ್ದಾರೆ.
ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ವಾರಾಣಸಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ IX 1086ರಲ್ಲಿ ಮಾರ್ಗಮಧ್ಯೆ ಈ ಅಚಾತುರ್ಯ ಸಂಭವಿಸಿದೆ. ಇದನ್ನು ಗಮನಿಸಿದ ವಿಮಾನ ಸಿಬ್ಬಂದಿ ಕೂಡಲೇ ಪ್ರಯಾಣಿಕನನ್ನು ಕಾಕ್ಪಿಟ್ನಿಂದ ಶೌಚಾಲಯಕ್ಕೆ ಕರೆದೊಯ್ದಿದ್ದಾರೆ.
‘ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕಾರಣ ಮಾಹಿತಿ ಕೊರತೆಯಿಂದ ಪ್ರಯಾಣಿಕ ಕಾಕ್ಪಿಟ್ ಬಾಗಿಲನ್ನು ಶೌಚಾಲಯ ಬಾಗಿಲು ಎಂದು ತಪ್ಪಾಗಿ ಭಾವಿಸಿ ತೆರೆಯಲು ಯತ್ನಿಸಿದ್ದಾರೆ. ಇದು ಉದ್ದೇಶಪೂರ್ವಕ ಕೃತ್ಯ ಅಲ್ಲ’ ಎಂದು ಮೂಲಗಳು ತಿಳಿಸಿವೆ.
‘ವಾರಾಣಸಿಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಮೂತ್ರ ವಿಸರ್ಜನೆಗಾಗಿ ಶೌಚಾಲಯ (ಲ್ಯಾವೆಟರಿ) ಹುಡುಕುತ್ತ ಕಾಕ್ಪಿಟ್ ಬಳಿ ತೆರಳಿದ ವರದಿ ಲಭ್ಯವಾಗಿದೆ. ಇದು ಭದ್ರತಾ ಲೋಪವಲ್ಲ. ವಿಮಾನ ವಾರಾಣಸಿಯಲ್ಲಿ ಇಳಿದ ನಂತರ ಭದ್ರತಾ ಸಂಸ್ಥೆಗೆ ಘಟನೆಯ ಮಾಹಿತಿ ನೀಡಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಏರ್ ಇಂಡಿಯಾ ಪ್ರಕಟಣೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.