
ದೇವನಹಳ್ಳಿ: ಕಡಲೆಕಾಯಿ ಕಡಲೆಕಾಯಿ ಎನ್ನುತ್ತಿರುವ ವ್ಯಾಪಾರದ ದೃಶ್ಯ ಪಟ್ಟಣದ ನೆಹರು ಪಾರಿವಾಟ ಗುಟ್ಟದ ಆಂಜನೇಯ ದೇವಾಲಯದಲ್ಲಿ ಮಂಗಳವಾರ ನಡೆದ 70ನೇ ವರ್ಷದ ಕಡಲೆಕಾಯಿ ಪರಿಷೆಯಲ್ಲಿ ಕಂಡುಬಂತು.
ವ್ಯಾಪಾರಸ್ಥರು ಕಡಲೆಕಾಯಿಯನ್ನು ರಾಶಿ ಹಾಕಿ ಮಾರಿದರು. ಕೆ.ಜಿ ಕಡಲೆಕಾಯಿಗೆ ₹100, ₹120 ರಂತೆ ಮಾರಾಟ ಮಾಡಿದರು. ಹುರಿದ ಕಡಲೆಕಾಯಿಗೆ ಒಂದು ಸೇರಿಗೆ ₹25ರಂತೆ ಮಾರಾಟ ಮಾಡುತ್ತಿದ್ದರು. ಹುರಿದ ಕಡಲೆಕಾಯಿ ಕೆ.ಜಿಗೆ ₹100ರಂತೆ ಮಾರಾಟವಾಗುತ್ತಿತ್ತು.
ಪರಿಷೆಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಬಡ್ಡಿ ಪಂದ್ಯಾವಳಿ ಹಾಗೂ 100 ಮೀಟರ್ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾಸುಗಳ ಪ್ರದರ್ಶನದಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟ, ನಾಡ ಕುಸ್ತಿ ಪಂದ್ಯಾವಳಿ ನಡೆದವು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಆಂಜನೇಯಗೆ ಅಲಂಕಾರ ಮಾಡಲಾಗಿತ್ತು. ಸಹಸ್ರ ನಾಮಾರ್ಚನೆ ನಡೆಯಿತು. ಗವಿಬೀರಲಿಂಗೇಶ್ವರ ಮತ್ತು ಭಕ್ತಕನಕದಾಸಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕಡಲೆಕಾಯಿ ಪರಿಷೆ ಅಂಗವಾಗಿ ಕಾರ್ತಿಕಮಾಸ ದೀಪದರ್ಶನ ನಡೆಸಿದರು.