ADVERTISEMENT

ದೊಡ್ಡಬಳ್ಳಾಪುರ: ಮುಂದುವರಿದ ವರುಣನ ಆರ್ಭಟ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 3:04 IST
Last Updated 7 ಸೆಪ್ಟೆಂಬರ್ 2022, 3:04 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಅರ್ಕಾವತಿ ನದಿ ಪಾತ್ರದ ಶಿವಪುರ ಕೆರೆ ಎರಡು ದಶಕದ ನಂತರ ಕೋಡಿ ಹರಿಯುತ್ತಿದೆ
ದೊಡ್ಡಬಳ್ಳಾಪುರ ತಾಲ್ಲೂಕಿನ ಅರ್ಕಾವತಿ ನದಿ ಪಾತ್ರದ ಶಿವಪುರ ಕೆರೆ ಎರಡು ದಶಕದ ನಂತರ ಕೋಡಿ ಹರಿಯುತ್ತಿದೆ   

ದೊಡ್ಡಬಳ್ಳಾಪುರ:ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿಯೂ ಮಳೆ ಆರ್ಭಟ ಮುಂದುವರಿದಿದ್ದು, ಹಲವು ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಕೆಲವೆಡೆ ಮನೆ, ದೇವಾಲಯ ಸೇರಿದಂತೆ ಕೃಷಿ ಜಮೀನುಗಳಿಗೆ ನೀರು ನುಗ್ಗಿದೆ.

ಎರಡೂವರೆ ದಶಕದ ನಂತರ ತುಂಬಿದ ಕಸುವನಹಳ್ಳಿ, ಅರದೇಶನಹಳ್ಳಿ, ಬಸವನಪುರ ಕೆರೆ, ಸೊಣ್ಣಪ್ಪನಹಳ್ಳಿ ಕೆರೆ, ಕಾಡನೂರು, ಹಮಾಮ್ ಶಿವಪುರ, ರಾಜಘಟ್ಟ ಕೆರೆ ಸೇರಿದಂತೆ ಅನೇಕ ಕೆರೆಗಳು ಕೋಡಿ ಬಿದ್ದಿದ್ದು, ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.

ನಗರದ ಹೃದಯ ಭಾಗದಲ್ಲಿನ ನಾಗರಕೆರೆ ಒಂದು ವಾರದಿಂದಲೂ ಕೋಡಿ ಹರಿಯುತ್ತಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಬೃಹತ್‌ ಪ್ರಮಾಣದಲ್ಲಿ ಕೆರೆ ಕೋಡಿಯಿಂದ ನೀರು ಹೊರ ಹೋಗುತ್ತಿದೆ.

ADVERTISEMENT

ಕೆರೆಯಲ್ಲಿ ಬೆಳೆದಿದ್ದ ಕಳೆ ಗಿಡಗಳು, ನಗರದ ಕಸ ಸೇರಿದಂತೆ ಎಲ್ಲವೂ ಕೋಡಿ ನೀರಿನಲ್ಲಿ ಕೊಚ್ಚಿಕೊಂಡು ಹೊರ ಹೋಗುತ್ತಿದೆ. ನಾಗರಕೆರೆ ಕೋಡಿ ನೀರು ನಗರದಿಂದ ಬೆಂಗಳೂರಿನ ಕಡೆಗೆ ಹೋಗುವ ಖಾಸ್‌ಬಾಗ್‌ ರಸ್ತೆಯಲ್ಲಿ ಹರಿಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ
ಅಡ್ಡಿಯಾಗಿತ್ತು.

ಇದೇ ರಸ್ತೆಯಲ್ಲಿನ ಐತಿಹಾಸಿಕ ರಾಮಣ್ಣ ಕಲ್ಯಾಣಿ ತುಂಬಿ ಹೊರಬರುತ್ತಿದ್ದ ನೀರು ಕಲ್ಯಾಣಿ ದಡದಲ್ಲಿನ ಆಂಜನೇಯಸ್ವಾಮಿ ದೇವಾಲಯದ ಆವರಣಕ್ಕೆ ನುಗ್ಗಿದ್ದರಿಂದ ಭಕ್ತಾದಿಗಳು ದೇವಾಲಯದ ಒಳಗೆ ಹೋಗಲು ಅಡ್ಡಿಯಾಯಿತು. ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ರೈತರ ಕಬ್ಬಿನ ತೋಟ, ತರಕಾರಿ ಬೆಳೆ, ರಾಗಿ, ಜೋಳ ಮತ್ತಿತರೆ ಬೆಳೆಗಳು ಜಲಾವೃತ್ತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.