ಆನೇಕಲ್: ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಬಂದಿದ್ದ ನೇಪಾಳ ಮೂಲದ ವ್ಯಕ್ತಿಯೊಬ್ಬ ತನ್ನ ಮೂರು ಮಂದಿ ಸಹಚರರೊಂದಿಗೆ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕನ ಕೈ ಕಾಲು ಕಟ್ಟಿ ಹಾಕಿ ನಗದು ಹಾಗೂ ಚಿನ್ನಾಭರಣ ದೋಚಿರುವ ಘಟನೆ ತಾಲ್ಲೂಕಿನ ಸರ್ಜಾಪುರದ ರಾಮರೆಡ್ಡಿ ಕಾಂಪ್ಲೆಕ್ಸ್ನಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಮನೆಯ ಲಾಕರ್ನಲ್ಲಿದ್ದ ₹ 30 ಲಕ್ಷ ನಗದು ಮತ್ತು ₹ 12 ಲಕ್ಷ ಬೆಲೆ ಬಾಳುವ 250 ಗ್ರಾಂ ಚಿನ್ನಾಭರಣಗಳನ್ನು ದೋಚಲಾಗಿದೆ.
ಬಿ.ಆರ್. ಮಧುಸೂದನ್ ರೆಡ್ಡಿ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಮಧುಸೂದನ್ ಅವರ ಮಗ ಮತ್ತು ಪತ್ನಿ ಕೂಡ್ಲುನಲ್ಲಿರುವ ಮನೆಗೆ ಹೋಗಿದ್ದರು. ಸರ್ಜಾಪುರದ ಮನೆಯಲ್ಲಿ ಮಧುಸೂದನ್ ಒಬ್ಬರೇ ವಾಸವಾಗಿದ್ದರು. ಅವರು ಒಬ್ಬರೇ ಇರುವುದನ್ನು ಗಮನಿಸಿದ್ದ ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ರೋಷನ್ ತನ್ನ ಮೂರು ಮಂದಿ ಸಹಚರರೊಂದಿಗೆ ಸಂಚು ಹೂಡಿ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಷನ್ ಮತ್ತು ಆತನ ಹೆಂಡತಿ ಕಾಂಪ್ಲೆಕ್ಸ್ನಲ್ಲಿ ಲೇಬರ್ ಶೆಡ್ನಲ್ಲಿ ವಾಸವಾಗಿದ್ದರು. ಮನೆಯ ಸಂಪ್ ಸ್ವಚ್ಛಗೊಳಿಸಲು ರೋಷನ್ ಸೋಮವಾರ ಪರಿಚಯದ ವ್ಯಕ್ತಿಯೊಬ್ಬರನ್ನು ಕರೆಯಿಸಿದ್ದರು. ಸಂಪ್ ಸ್ವಚ್ಛಗೊಳಿಸಿದ ನಂತರ ಮಂಗಳವಾರ ರಾತ್ರಿ ಸಂಪ್ ಕ್ಲೀನ್ ಮಾಡಿದ್ದ ವ್ಯಕ್ತಿ, ರೋಷನ್ ಮತ್ತು ಇತರೆ ಇಬ್ಬರು ಮನೆಯ ಮಹಡಿಯ ಬಾಗಿಲ ಶೀಟ್ ಅನ್ನು ಕತ್ತರಿಸಿ ಒಳನುಗ್ಗಿ ಒಂಟಿಯಾಗಿದ್ದ ಮನೆಯ ಮಾಲೀಕ ಮಧೂಸೂದನ್ ರೆಡ್ಡಿ ಅವರ ಕೈಕಾಲು ಕಟ್ಟಿಹಾಕಿ ನಗದು ಮತ್ತು ಚಿನ್ನವನ್ನು ದೋಚಿದ್ದಾರೆ.
ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಇನ್ಸ್ಪೆಕ್ಟರ್ ನವೀನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.