ADVERTISEMENT

ಹೆಸರು ನೋಂದಣಿ ಸ್ಥಗಿತ: ಅಧಿಕಾರಿಗಳ ಜತೆ ರೈತರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 6:37 IST
Last Updated 28 ಏಪ್ರಿಲ್ 2022, 6:37 IST
ದೊಡ್ಡಬಳ್ಳಾಪುರ ರಾಗಿ ಖರೀದಿ ಕೇಂದ್ರದ ಮುಂದೆ ನೂರಾರು ಸಂಖ್ಯೆಯಲ್ಲಿ ಸೇರಿರುವ ರೈತರು. ಇಂದು ಸಹ ನೋಂದಣಿ ಸ್ಥಗಿತ.
ದೊಡ್ಡಬಳ್ಳಾಪುರ ರಾಗಿ ಖರೀದಿ ಕೇಂದ್ರದ ಮುಂದೆ ನೂರಾರು ಸಂಖ್ಯೆಯಲ್ಲಿ ಸೇರಿರುವ ರೈತರು. ಇಂದು ಸಹ ನೋಂದಣಿ ಸ್ಥಗಿತ.   

ದೊಡ್ಡಬಳ್ಳಾಪುರ: ಮೂರನೇ ದಿನವಾದ ಗುರುವಾರವೂ ರಾಗಿ ಖರೀದಿಗೆ ಹೆಸರು ನೋಂದಣಿ ಪ್ರಕ್ರಿಯೆ ಆರಂಭವಾಗದ ಕಾರಣ ರೊಚ್ಚಿಗೆದ್ದ ರೈತರು ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ.

ಇಲ್ಲಿಯ ರಾಗಿ ಕೇಂದ್ರದ ಮುಂದೆ ಜಮಾಯಿಸಿರುವ ನೂರಾರು ರೈತರನ್ನು ಸಮಾಧಾನಪಡಿಸಲು ತಹಶೀಲ್ದಾರ್ ಮೋಹನಕುಮಾರಿ ಮತ್ತು ಅಧಿಕಾರಿಗಳು ರೈತರನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದ್ದಾರೆ. ಆದರೆ, ರೈತರ ಸಿಟ್ಟು ತಣಿದಿಲ್ಲ.

ರಾಗಿ ಖರೀದಿಗೆ ರಾಜ್ಯಕ್ಕೆ ನಿಗದಿಪಡಿಸಲಾಗಿದ್ದ ಕೋಟಾ ಮುಗಿದ ಕಾರಣ ಹೆಸರು ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದರಿಂದ ಹೆಸರು ನೋಂದಾಯಿಸಲು ಕಾಯ್ದಿದ್ದ ರೈತರ ಆಕ್ರೋಶ ಕಟ್ಟೆಯೊಡೆದಿದೆ. ಸಿಬ್ಬಂದಿ ಮೇಲೆ ಮುಗಿಬಿದ್ದಿದ್ದಾರೆ.

ADVERTISEMENT

ಮೊದಲ ದಿನ ಸರ್ವರ್ ಸಮಸ್ಯೆ, ಎರಡನೇ ದಿನ ಆಯ್ದ ಕೆಲವು ರೈತರ ಹೆಸರು ಮಾತ್ರ ನೋಂದಣಿ ಮಾಡಿಕೊಳ್ಳಲಾಗಿದೆ. ಮೂರನೇ ದಿನ ಖರೀದಿ ಕೋಟಾ ಮುಗಿದಿದೆ ಎಂದು ಸಿಬ್ಬಂದಿ ಸಬೂಬು ಹೇಳುತ್ತಿದ್ದಾರೆ.ಮೂರು ದಿನಗಳಿಂದ ಎಲ್ಲ ಕೆಲಸ ಬಿಟ್ಟು ಖರೀದಿ ಕೇಂದ್ರಕ್ಕೆ ಅಲೆಯುತ್ತಿದ್ದೇವೆ. ಆದರೂ ಹೆಸರು ನೋಂದಣಿ ಆಗಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದರು.

ರಾಗಿ ಖರೀದಿಗೆ ಹೆಸರು ನೋಂದಣಿ ಮಾಡಿಕೊಳ್ಳುವವರಿಗೆ ಸ್ಥಳದಿಂದ ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.ರಾಗಿ ಖರೀದಿಗೆ ರಾಜ್ಯಕ್ಕೆ ನಿಗದಿಪಡಿಸಿದ ಕೋಟಾ ಮುಗಿದ ಕಾರಣ ನನ್ನಿಂದಲೂ ಏನು ಮಾಡಲು ಸಾಧ್ಯವಿಲ್ಲ ಎಂದು ತಹಶೀಲ್ದಾರ್ ಮೋಹನಕುಮಾರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಬರಲು ಹೇಳಿ, ಕಾಯುತ್ತಿದ್ದಾರೆ.ಖರೀದಿ ಕೇಂದ್ರದ ಮುಂದೆ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಸಾಕಷ್ಟು ಸಂಖ್ಯೆಯ ಪೊಲೀಸರು ಬೀಡು ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.