ADVERTISEMENT

ನಗ, ನಾಣ್ಯ ಕದ್ದು ತುಪ್ಪವನ್ನೂ ತಿಂದು ಹೋದ ಕಳ್ಳರು!

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 15:21 IST
Last Updated 18 ನವೆಂಬರ್ 2019, 15:21 IST
   

ದೊಡ್ಡಬಳ್ಳಾಪುರ: ಬಸವೇಶ್ವರ ನಗರದ ನಿವಾಸಿ ತ್ಯಾಗರಾಜ್ ಎಂಬುವವರು ಸಂಬಂಧಿಗಳ ಮನೆಯಲ್ಲಿನ ವಿವಾಹಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ಮನೆ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿದೆ.

ಸುಮಾರು ₹3 ಲಕ್ಷ ಮೌಲ್ಯದ ಚಿನಾಭರಣ, ಅರ್ಧ ಕೆಜಿಯಷ್ಟು ಬೆಳ್ಳಿ ಸಾಮಾನು, ₹30,000 ನಗದು ಕಳವಾಗಿದೆ. ಮನೆಯಲ್ಲಿನ ಎಲ್ಲಾ ಬೀರುಗಳ ಬೀಗವನ್ನು ಮುರಿದು ಅದರಲ್ಲಿನ ಬಟ್ಟೆ, ಸಾಮಾನುಗಳನ್ನು ಹೊರಗೆಳೆದಿರುವ ಕಳ್ಳರು, ಚಿನ್ನಾಭರಣ, ನಗದಿಗಾಗಿ ಹುಡುಕಾಟ ನಡೆಸಿದ್ದಾರೆ. ಇದರಿಂದ ಇಡೀ ಮನೆಯಲ್ಲಿ ಬಟ್ಟೆಗಳು ಹರಡಿ ಬಿದ್ದಿವೆ.

ತುಪ್ಪ ತಿಂದ ಕಳ್ಳರು: ತ್ಯಾಗರತಾಜ್ ಅವರ ಮನೆಯಲ್ಲಿ ಚಿನ್ನಾಭರಣಗಳನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಮಂಚದ ಕೆಳಗೆ ಹಾಕಲಾಗಿತ್ತು. ಚಾಲಾಕಿ ಕಳ್ಳರು ಇದನ್ನು ಸಹ ಪತ್ತೆ ಹಚ್ಚಿ ಕಳವು ಮಾಡಿದ್ದಾರೆ. ಇಲ್ಲಿಂದ ಅಡುಗೆ ಮನೆಗೆ ಹೋಗಿರುವ ಕಳ್ಳರು ಅಲ್ಲಿನ ಸಾಸಿವೆ, ಕಡಲೆ ಬೀಜ ಮತ್ತಿತರೆ ಡಬ್ಬಿಗಳಲ್ಲಿನ ಪದಾರ್ಥಗಳನ್ನು ಕಳೆಗೆ ಚಲ್ಲಿದ್ದಾರೆ. ಆದರೆ ತುಪ್ಪದ ಡಬ್ಬಿಯ ಮುಚ್ಚಳವನ್ನು ಮಾತ್ರ ಜೋಪಾನವಾಗಿ ತೆಗೆದು ಅದರಲ್ಲಿನ ತುಪ್ಪವೆಲ್ಲವನ್ನು ತಿಂದು ಡಬ್ಬಿಯನ್ನು ಖಾಲಿ ಮಾಡಿಟ್ಟು ಹೋಗಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ. ಕಳವು ಕುರಿತಂತೆ ನಗರ ಪೊಲೀಸ್ ದೂರು ಸ್ವೀಕರಿಸಿ ತನಿಖೆ ಕೈಗೊಂಡಿದ್ದಾರೆ.

ADVERTISEMENT

ವಾಯು ವಿಹಾರಕ್ಕೆ ಹೋಗಿದ್ದ ಮಹಿಳೆಯ ಮಾಂಗಲ್ಯ ಸರಕಳವು ಸೇರಿದಂತೆ ಒಂದು ವಾರದಿಂದ ಈಚೆಗೆ ಈ ಭಾಗದಲ್ಲಿ ನಡೆದಿರುವ ಮೂರನೇ ಕಳವು ಪ್ರಕರಣ ಇದಾಗಿದ್ದು ಸಾರ್ವಜನಿಕರು ಆತಂಕದಿಂದ ದಿನ ಕಳೆಯುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.