ಹೊಸಕೋಟೆ: ‘ನಮ್ಮ ಪಕ್ಷದಲ್ಲಿದ್ದಾಗ ತಮಗೆ ನಾಲ್ಕು ಬಾರಿ ಟಿಕೆಟ್ ನೀಡಿತ್ತು, ಅಧಿಕಾರದಲ್ಲಿದ್ದಾಗ ಕ್ಷೇತ್ರದ ಅಭಿವೃದ್ದಿಗೆ ಕೇಳಿದಷ್ಟು ಹಣ ಬಿಡುಗಡೆ ಮಾಡಿತ್ತು, ತಮ್ಮನ್ನು ಮಂತ್ರಿ ಮಾಡಿತ್ತು. ಆದರೂ ಯಾವ ಪುರುಷಾರ್ಥಕ್ಕಾಗಿ ಕಾಂಗ್ರೆಸ್ ಗೆ ರಾಜಿನಾಮೆ ನೀಡಿದಿರಿ ಎಂದು ಎಂ.ಟಿ.ಬಿ ನಾಗರಾಜ್ ಅವರನ್ನು ಮಾಜಿ ಸಚಿವೆ ಉಮಾಶ್ರೀ ಪ್ರಶ್ನಿಸಿದರು.
ಅವರು ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಪರವಾಗಿ ಮತಯಾಚಿಸಲು ರೋಡ್ ಶೋಗೆ ತೆರಳುವ ಮುನ್ನ ಪರ್ತಕರ್ತರೊಂದಿಗೆ ಮಾತನಾಡುತ್ತಿದ್ದರು.
ನಾಗರಾಜ್ ಅವರ ಬಳಿ ಸ್ವತಂತ್ರ ಕಾಲದಿಂದಲೂ ಇರುವಂತಹ ರಾಷ್ಟ್ರೀಯ ಪಕ್ಷವಿತ್ತು. ಸೂಕ್ತ ಮಾರ್ಗದರ್ಶನ ಮಾಡಲು ದೇಶವನ್ನಾಳಿದ ಸಮರ್ಥ ನಾಯಕರಿದ್ದರು. ತಮ್ಮ ಬಳಿ ಹಣವಿತ್ತು; ಅಧಿಕಾರವತ್ತು. ಜನಸೇವೆ ಮಾಡಲು ಕ್ಷೇತ್ರದ ಜನ ಆಯ್ಕೆಮಾಡಿದ್ದರು. ಪಕ್ಷ ಮಂತ್ರಿ ಮಾಡಿತ್ತು. ಮತ್ತೇಕೆ ಎಲ್ಲವನ್ನೂ ಬಿಟ್ಟು ಕೋಮುವಾದಿ ಬಿಜೆಪಿಗೆ ಸೇರಿದಿರಿ. ಮತದಾರರಿಗೆ ಮೋಸ ಮಾಡುವ ಬುದ್ಧಿ ಹೇಗೆ ಬಂತು ಎಂದು ಕೇಳಿದರು.
ಗೆಲ್ಲಿಸಿದ ಮತದಾರರನ್ನು ಮರೆತು ಕ್ಷೇತ್ರದ ಅಬಿವೃದ್ಧಿಯನ್ನು ಮರೆತು ಉತ್ತರ ಕರ್ನಾಟಕದ ನೆರೆ ಸಂತಸ್ತರನ್ನು ಮರೆತು ವೈಯಕ್ತಿಕ ಲಾಭಕ್ಕಾಗಿ ಮುಂಬೈಯ ಐಶಾರಾಮಿ ಹೋಟೆಲ್ ನಲ್ಲಿ ಜೀವನ ಸಾಗಿಸಿದ ನಿಮಗೆ ಕ್ಷೇತ್ರದ ಮತದಾರರು ಸರಿಯಾಗಿ ಬುದ್ಧಿ ಕಲಿಸಿ ಪದ್ಮಾವತಿ ಸುರೇಶ್ ಅವರನ್ನು ಗೆಲ್ಲಿಸುತ್ತಾರೆ ಎಂದು ಸವಾಲೆಸೆದರು.
ಪದ್ಮಾವತಿ ಸುರೇಶ್, ಶಾಸಕ ಶಿವಣ್ನ, ಎಂಟಿಬಿ ನಾಗರಾಜ್ ಸಹೋದರ ಪಿಳ್ಳಣ್ಣ, ಎಐಸಿಸಿ ಸದಸ್ಯೆ ಕಮಲಾಕ್ಷಿ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.