ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಅಂಚೆ ಇಲಾಖೆ ಮತ್ತು ಕಳಿಂಗ ಫೌಂಡೇಷನ್ನಿಂದ ವಿಶ್ವ ಹಾವುಗಳ ದಿನಾಚರಣೆಯನ್ನು ಬುಧವಾರ ಆಯೋಜಿಸಲಾಗಿತ್ತು. ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾವುಗಳ ಬಗ್ಗೆ ಮಾಹಿತಿ ಪಡೆದರು.
ಬನ್ನೇರುಘಟ್ಟದಲ್ಲಿ ಪೋಸ್ಟ್ ಕ್ರಾಸಿಂಗ್ ವೆಲ್ಪೇರ್ ಸೊಸೈಟಿ ಆಫ್ ಇಂಡಿಯಾ, ಡಬ್ಲ್ಯೂಆರ್ಆರ್ಸಿ ಮತ್ತು ರೌಂಡ್ ಗ್ಲಾಸ್ ಸಸ್ಪೈನ್ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಿ ಬಹುಮಾನ ನೀಡಲಾಯಿತು. ಹಾವುಗಳ ವಿಶೇಷ ಚಿತ್ರಗಳುಳ್ಳ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಲಾಯಿತು.
ಕಳಿಂಗ ಫೌಂಡೇಷನ್ನ ಪ್ರಿಯಾಂಕ ಸ್ವಾಮಿ ಹಾವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿವಿಪುರಂ ಕಾನೂನು ಕಾಲೇಜು, ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಶಾಲೆ, ರಾಯಲ್ ಪಬ್ಲಿಕ್ ಶಾಲೆ, ಆರ್ಕಿಡ್ ಇಂಟರ್ನ್ಯಾಷನಲ್ ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಉದ್ಯಾನದಲ್ಲಿನ ಹಾವುಗಳ ಚಲನವಲನಗಳ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು. ಹಾವುಗಳ ಚಿತ್ರಗಳುಳ್ಳ ಪ್ರಾತ್ಯಕ್ಷಿಕೆ ಬಳಿ ಸಿಬ್ಬಂದಿ ಹಾವುಗಳ ಜೀವನ ಶೈಲಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ಎ.ವಿ.ಸೂರ್ಯಸೇನ್ ಮಾತನಾಡಿ, ಪರಿಸರ ಸಮತೋಲನ ಕಾಪಾಡುವಲ್ಲಿ ಹಾವುಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾವುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹಾವುಗಳ ಸಂರಕ್ಷಣೆಗೆ ಆದ್ಯತೆ ಮೂಡಿಸುವ ಸಲುವಾಗಿ ಹಾವುಗಳ ದಿನಾಚರಣೆ ಆಚರಿಸಿ ಹಾವುಗಳ ಚಲನವಲನಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹಾವಿನ ಬಗ್ಗೆ ಜನರಲ್ಲಿರುವ ಭಯ ಹೋಗಲಾಡಿಸಿ, ಅರಿವು ಮೂಡಿಸಬೇಕು ಎಂದು ಹೇಳಿದರು.
ಭಾರತೀಯ ಅರಣ್ಯ ಸೇವೆ ಅಧಿಕಾರಿಗಳಾದ ಕಾಜೋಲ್ ಅಜಿತ್ ಪಾಟೀಲ್, ಐಪಿಒಎಸ್ ಸಂದೇಶ್ ಮಹದೇವಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.