ADVERTISEMENT

25 ವರ್ಷದ ಬಳಿಕ ಎಸ್ಸೆಸ್ಸೆಲ್ಸಿ ಶಿಕ್ಷಕರನ್ನು ಮೆರವಣಿಗೆ ಮಾಡಿದ ವಿದ್ಯಾರ್ಥಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಡಿಸೆಂಬರ್ 2022, 14:00 IST
Last Updated 26 ಡಿಸೆಂಬರ್ 2022, 14:00 IST
1996-97ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚಿನ 25ನೇ ಬೆಳ್ಳಿ ಹಬ್ಬ
1996-97ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚಿನ 25ನೇ ಬೆಳ್ಳಿ ಹಬ್ಬ   

ಬೆಳಗಾವಿ (ಐನಾಪುರ): ಮನುಷ್ಯ ಭೂಮಿಯ ಮೇಲೆ ಹುಟ್ಟಿದ ಮೇಲೆ ತಂದೆ-ತಾಯಿಗಳು, ಗುರು, ಸಮಾಜದ ಋಣಗಳನ್ನು ತೀರಿಸಬೇಕು ಎಂದು ಕೆಆರ್‌ಇ ಸಂಸ್ಥೆಯ ಹೈಸ್ಕೂಲ್ ನಿವೃತ್ತಿ ಶಿಕ್ಷಕರಾದ ಸಿ.ಎಂ ಹಿರೇಮಠ್ ಅವರು ಹೇಳಿದರು.

ಭಾನುವಾರ(ಡಿ.25) ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ವಿಶ್ವನಾಥ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಕೆ ಆರ್ ಇ ಎಸ್ ಸಂಸ್ಥೆಯ ಹೈಸ್ಕೂಲ್‌ನ 1996-97ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚಿನ 25ನೇ ಬೆಳ್ಳಿ ಹಬ್ಬ, ಗುರುವಂದನಾ ಹಾಗೂ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮವನ್ನು ಉದ್ಗಾಟಿಸಿ, ಮಾತನಾಡಿದರು.

''ಗುರು ತನ್ನ ಉಸಿರಿರುವರೆಗೂ ಬದುಕಿ ಬಾಳಲು ಸಾಧ್ಯವಾಗಿರುವಂಥ ವಿದ್ಯೆಯನ್ನು ಕೊಡುತ್ತಾನೆ. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಂಸ್ಕಾರದ ಬೀಜವನ್ನು ಬಿತ್ತಿ ಬೆಳೆಸಿ, ಬದುಕಿಗೆ ದಾರಿ ದೀಪ ತೋರಿ ಕಲ್ಲಿನಂತಿರುವ ಮಕ್ಕಳನ್ನು, ಕಟೆದು ಸುಂದರ ಮೂರ್ತಿಯನ್ನಾಗಿ ರೂಪಿಸುತ್ತಾರೆ. ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಅಜ್ಞಾನಿಗಳನ್ನು, ಸುಜ್ಞಾನಿಗಳನ್ನು ಮಾಡುತ್ತಾರೆ ಎಂದು ಹೇಳಿದರು.

ADVERTISEMENT

ಇಂಗ್ಲಿಷ್ ಶಿಕ್ಷಕರಾಗಿದ್ದ ಐ ಎಂ ಹಿರೇಮಠ್, ಹಾಲಿ ಉಪಪ್ರಾಂಶುಪಾಲರಾದ ಎ.ಎಂ ಹುಲ್ಲೇನ್ನವರ್ ಮಾತನಾಡಿ 1996-97ನೇ ಬ್ಯಾಚ್ ಹೇಗೆ ವಿಶಿಷ್ಟವಾಗಿತ್ತು ಎಂದು ವಿವರಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಉಪಪ್ರಾಂಶುಪಾಲರಾದ ಎಸ್‌ ಐ ಹೊನ್ನಳ್ಳಿ ಅವರು, ವಿದ್ಯೆ ಧಾರೆ ಎರೆದ ಶಿಕ್ಷಕರನ್ನು 25 ವರ್ಷದ ಬಳಿಕ ಒಂದೆಡೆ ಸೇರಿಸಿ, ಅವರನ್ನು ಸತ್ಕರಿಸುತ್ತಿರುವುದು ಅಪೂರ್ವ ನಡೆ ಎಂದು ಬಣ್ಣಿಸಿದರು.

ಹಳೆಯ ವಿದ್ಯಾರ್ಥಿಗಳಾದ ಬದರಿ ಉಮರ್ಜಿ, ಸೀತಾ ಕಟ್ಟಿ, ಶ್ರೀಕಾಂತ್ ಕುಡಚಿ, ಗುರುಪಾದ ಡೂಗನವರ, ರಾಜು ಕಟ್ಟಿ, ಮಧು ಬೋಗಾರ, ರಾಜು ಕತ್ತಿ, ಕವಿತಾ ಜಾಧವ್, ಶಾಂತಾ ದಾನೋಳ್ಳಿ, ವಂದನಾ ಗಾಣಿಗೇರ, ಜ್ಯೋತಿ ಅಪರಾಜ, ರಮೇಶ್ ಕಾರೆ ಅವರು ತಮ್ಮ ಅನಿಸಿಕೆಗಳನ್ನು ಹೇಳಿದರು. ಕಾರ್ಯಕ್ರಮಕ್ಕೂ ಮುಂಚೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಭೇಟಿ, ನೀಡಿ ತಮ್ಮ ಹೈಸ್ಕೂಲ್ ದಿನಗಳನ್ನು ಮೆಲುಕು ಹಾಕಿದರು. ಆಗ ಮಾಡುತ್ತಿದ್ದ ಕೀಟಲೆ, ಕುಚೇಷ್ಟೆಗಳನ್ನು ಮತ್ತೆ ಮರುಸೃಷ್ಟಿಸಿ ಖುಷಿಪಟ್ಟರು. ಇದೊಂದು ಅಪೂರ್ವ ಸ್ನೇಹ ಸಮ್ಮಿಲನದ ಕಾರ್ಯಕ್ರಮವೇ ಆಗಿತ್ತು.

ಮೆರವಣಿಗೆಯಲ್ಲಿ ಸ್ವಾಗತ

ಕಾರ್ಯಕ್ರಮದಲ್ಲಿ ತಮ್ಮ ಬದುಕಿಗೆ ಭದ್ರ ಬುನಾದಿ ಹಾಕಿದ ಗುರುಗಳನ್ನು, ಗುರುಮಾತೆಯರಿಗೆ ಮೆರವಣಿಗೆಯಲ್ಲಿ ಪುಷ್ಪವೃಷ್ಟಿ ಮಾಡುತ್ತಾ, ವೇದಿಕೆಗೆ ವಿದ್ಯಾರ್ಥಿಗಳು ಬರಮಾಡಿಕೊಂಡರು. ಹೈಸ್ಕೂಲ್ ಶಿಕ್ಷಕರಾದ ಬಿ ಎ ಪಾಟೀಲ, ಆರ್ ಎಸ್ ಗೋಣಿ, ಪುಷ್ಪಾ ದೇಶಪಾಂಡೆ , ಸಿ ಎಂ ಹಿರೇಮಠ್, ಆರ್ ಬಿ ನೂಲಿ, ಎನ್ ಬಿ ಭೂವಿ, ಸಿ ಎಂ ಹಿರೇಮಠ್, ಸಿ ಎಂ ಯಾದವಾಡ, ಆರ್ ಎಸ್ ಕಡಕೋಳಮಠ, ಬಿ ಬಿ ಕತ್ತಿ, ಎಸ್ ಎಂ ಮಾಣಕೋಜಿ, ಉಪ ಪ್ರಾಂಶುಪಾಲರಾದ ಎ ಎಂ ಹುಲ್ಲೆನ್ನವರ್, ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕೆ.ಎ ಪಾಟೀಲ್, ಕೆ ಆಯ್ ಅವಟಿ, ಟಿ ಬಿ ಭೊಸಲೆ, ಎಸ್ ಎಸ್ ಕಾಂಬಳೆ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಗೌರವಿಸಿ, ಸನ್ಮಾನ ಮಾಡಲಾಯಿತು. ಆ ಮೂಲಕ ಹಳೆಯ ವಿದ್ಯಾರ್ಥಿಗಳು ಧನ್ಯತೆಯನ್ನು ಮೆರೆದರು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಬಾಹುಬಲಿ ಪಾಟೀಲ್, ಪ್ರಕಾಶ್ ಮಾನೆ, ಭೀಮಣ್ಣಾ ಅಪರಾಜ್, ತಮಣ್ಣಾ ಕಮತೆ, ಸಂಜು ಪಾಟೀಲ್, ಸಂಜು ರೆಡ್ಡಿ, ಬಸವರಾಜ್ ಅಕಿವಾಟೆ, ಕಿರಣ್ ಪೋತದಾರ್, ಕಿರಣ ಬಾಗಿ, ಬಾಳು ನಧಾಪ, ಬಾಳು ಪಾವಲಿ, ರೇಖಾ ಸತ್ತಿ, ಅರ್ಪಣಾ ಕಟ್ಟಿ, ವೀಣಾ ಪಾಟೀಲ್, ಸಂಗೀತಾ ಬಾಲೋಜಿ, ಗೀತಾ ಪಾವಲಿ, ಹಣಮಂತ ಸೋಂದಕರ್, ಸಂತೋಷ್ ಶಿರಗುಪ್ಪಿ ಸೇರಿದಂತೆ 120ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಹಾಗೂ ಕುಟುಂಬದ ಸದಸ್ಯರು ಸಭೆಗೆ ಆಗಮಿಸಿ, ಕಾರ್ಯಕ್ರಮಕ್ಕೆ ಶೋಭೆ ತಂದರು.

ಹಳೆಯ ವಿದ್ಯಾರ್ಥಿಗಳಾದ ಪತ್ರಕರ್ತ ಮಲ್ಲಿಕಾರ್ಜುನ ತಿಪ್ಪಾರ ಸ್ವಾಗತಿಸಿದರು. ವೈದೇಹಿ ಉಮರ್ಜಿ ಪ್ರಾರ್ಥಿಸಿದರು. ಶಿಕ್ಷಕ ಶಿವಶಂಕರ್ ಕುಂಬಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮೋದ್ ಲಿಂಬಿಕಾಯಿ ವಂದನಾರ್ಪಣೆ ಮಾಡಿದರು. ಶಿಕ್ಷಕ ವಿಜಯ್ ಹುದ್ದಾರ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.