ಅಥಣಿ: ನಾಡಿನ ಶ್ರೇಷ್ಠ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಪೌರಾಣಿಕ ಕಥೆಗಳ ಮೂಲಕ ಜನರ ಮನೆ ಮನ ಮುಟ್ಟುವ ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಬೇಕು. ಜಾನಪದ, ಬಯಲಾಟಗಳನ್ನು ಮುಂದಿನ ಯುವಜನಾಂಗಕ್ಕೆ ತರಬೇತಿ ನೀಡುವ ಮೂಲಕ ಉಳಿಸಿ ಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಖ್ಯಾತ ಪಾರಿಜಾತ ನಾಟಕದ ಹಿರಿಯ ಕಲಾವಿದೆ ಮಲ್ಲವ್ವ ಮ್ಯಾಗೇರಿ ಅಭಿಪ್ರಾಯ ಪಟ್ಟರು.
ಅವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆಯ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಥಣಿ ಸಹಯೋಗದಲ್ಲಿ ಜರುಗಿದ 2 ದಿನಗಳ ವಿಚಾರ ಸಂಕಿರಣ ಮತ್ತು ಬಯಲಾಟ ಪ್ರದರ್ಶನ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಡಾ. ಗುರುಪಾದ ಮರಿಗುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಡಾ. ಕೆ. ಆರ್. ದುರ್ಗಾದಾಸ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಿಷಯಗಳ ಕುರಿತು ಖ್ಯಾತ ಸಾಹಿತಿ ಡಾ. ಜೆ. ಪಿ. ದೊಡ್ಡಮನಿ, ಡಾ. ಪ್ರಿಯಂವದಾ ಹುಲಗಬಾಳಿ, ಪ್ರೋ ಪಿ ಎಲ್ ಪೂಜಾರಿ ಉಪನ್ಯಾಸ ನೀಡಿದರು. ಪ್ರಾಚಾರ್ಯ ಪ್ರೊ. ವಿಲಾಸ ಕಾoಬಳೆ ಮಾತನಾಡಿದರು.
ಬಯಲಾಟ ಅಕಾಡೆಮಿ ಸದಸ್ಯ ಭೀಮಪ್ಪ ಹುದ್ದಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದೆ ಕೆಂಪಮ್ಮ ಹರಿಜನ, ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಪ್ರೋ ಎಸ್ ಬಿ ದೇಗೌಡ, ಹಿರಿಯ ಪ್ರಾಧ್ಯಾಪಕ ಡಾ. ಶಾಂತಿನಾಥ ಬಳೋಜ, ಮಹಾವಿದ್ಯಾಲಯ ದ ಐಕ್ಯೂಎಸ್ ಸಿ ಸಂಚಾಲಕ ಜಿನೇಂದ್ರ ಬಣಜವಾಡ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಸಂತೋಷ ಉಂಡಾಡಿ ಉಪಸ್ಥಿತರಿದ್ದರು.
ಡಾ ವಿಜಯ ಕಾಂಬಳೆ ಸ್ವಾಗತಿಸಿದರು. ಡಾ ಮಹಾಂತೇಶ ಉಕ್ಕಲಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಆರ್ ಎಸ್ ದೊಡ್ಡನಿಂಗಪ್ಪಗೋಳ ನಿರೂಪಿಸಿದರು. ಡಾ. ಹರೀಶ ವಂದಿಸಿದರು. ವಿಚಾರ ಸಂಕಿರಣ ಬಳಿಕ ಸವದಿ ಗ್ರಾಮದ ಶ್ರೀ ವೀರಭದ್ರೇಶ್ವರ ಕಲಾ ಸಂಘದ ಕಲಾವಿದರಿಂದ ಶ್ರೀಕೃಷ್ಣ ಪಾರಿಜಾತ ಮತ್ತು ಅಮ್ಮಣಗಿ ಗ್ರಾಮದ ಶ್ರೀ ಅಂಬಿಕಾದೇವಿ ಬಯಲಾಟ ಸಂಘದ ಕಲಾವಿದರು ಅಭಿನಯಿಸಿದ ಸಂಗ್ಯಾ-ಬಾಳ್ಯಾ, ಬಯಲಾಟ ವಿದ್ಯಾರ್ಥಿಗಳನ್ನು ರಂಜಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.