ಬೆಳಗಾವಿ: 'ಬಜರಂಗ ದಳ ಕಾರ್ಯಕರ್ತರ ಮೇಲೆ ವಿನಾಕಾರಣ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಲಾಗುತ್ತಿದೆ' ಎಂದು ಆರೋಪಿಸಿ, ಇಲ್ಲಿನ ಶಹಾಪುರ ಠಾಣೆ ಎದುರು ಬಜರಂಗ ದಳ, ಹಿಂದು ಸಂಘಟನೆಗಳ ಕಾರ್ಯಕರ್ತರು ಮತ್ತು ಮಹಿಳೆಯರು ಶನಿವಾರ ಪ್ರತಿಭಟನೆ ನಡೆಸಿದರು.
'ಪಾಂಗುಳ ಗಲ್ಲಿಯ ಅಶ್ವತ್ಥಾಮ ಮಂದಿರದ ಮೇಲೆ ಕಲ್ಲು ಎಸೆದವರನ್ನು ಬಂಧಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಈಚೆಗೆ ಮನವಿ ಕೊಟ್ಟಿದ್ದೆವು. ಅದೇ ಸಿಟ್ಟಿನಿಂದ ಈಗ ನಮ್ಮ ಸಂಘಟನೆ ಕಾರ್ಯಕರ್ತರಾದ ಮನೋಜ ಹಲಗೇಕರ, ಶ್ರೀರಾಮ ಪೋಟೆ ಅವರನ್ನು ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಲಾಗುತ್ತಿದೆ. ದೇಶ, ಧರ್ಮದ ಪರವಾಗಿ ಕೆಲಸ ಮಾಡುವವರ ಮೇಲೆ ಕ್ರಮ ಜರುಗಿಸಲಾಗುತ್ತಿದೆ' ಎಂದು ದೂರಿದರು.
ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, 'ಲೂಟಿ ಮಾಡಿದವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಿ. ಆದರೆ, ಧರ್ಮಕ್ಕಾಗಿ ದುಡಿಯುವವರಿಗೆ ಅನ್ಯಾಯ ಮಾಡಬಾರದು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.