ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ನಿಂಗಪ್ಪ ಕರೆಣ್ಣವರ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.
ಅಥಣಿ(ಬೆಳಗಾವಿ ಜಿಲ್ಲೆ): ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಅವರ ಮೇಲೆ, ಶಾಸಕ ಲಕ್ಷ್ಮಣ ಅವದಿ ಅವರ ಮನೆಯ ಅಂಗಳದಲ್ಲಿ ಶನಿವಾರ ಹಲ್ಲೆ ಮಾಡಲಾಗಿದೆ. ರಕ್ತಸ್ರಾವದಿಂದ ಅವರು ಆಸ್ಪತ್ರೆ ಸೇರಿದ್ದಾರೆ.
'ಕೆಲ ಸಮಸ್ಯೆಗಳ ಕುರಿತು ಚರ್ಚಿಸಲು ಹೋದಾಗ, ಶಾಸಕ ಲಕ್ಷ್ಮಣ ಸವದಿ, ಅವರ ಪುತ್ರ ಚಿದಾನಂದ ಮತ್ತು ಮತ್ತೊಬ್ಬ ಬೆಂಬಲಿಗ ಶ್ರೀಕಾಂತ ಅಲಗೂರ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ನಿಂಗಪ್ಪ ಕರೆಣ್ಣವರ ಆರೋಪ ಮಾಡಿದ್ದಾರೆ.
‘ನಾನು, ಸಹೋದ್ಯೋಗಿ ಬಸವರಾಜ ಕಮತಗಿ ಸೇರಿ ಕೆಲವರು ಲಕ್ಷ್ಮಣ ಸವದಿ ಮನೆಗೆ ಹೋಗಿದ್ದೆವು. ಆಗ ಚಿದಾನಂದ ಅವರು, ಬಸವರಾಜ ಅವರನ್ನು ಅಶ್ಲೀಲ ಭಾಷೆಯಲ್ಲಿ ನಿಂದಿಸಿದರು. ಇದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿದಾಗ, 15ಕ್ಕೂ ಅಧಿಕ ಜನರು ಸೇರಿಕೊಂಡು ನಮ್ಮ ಮೇಲೆ ಹಲ್ಲೆ ನಡೆಸಿದರು. ನನ್ನೊಂದಿಗೆ ಇದ್ದ ನಾಲ್ವರಿಗೂ ಸಣ್ಣಪುಟ್ಟ ಗಾಯವಾಗಿವೆ’ ಎಂದು ದೂರಿದ್ದಾರೆ.
‘ಸವದಿ ಸಂಬಂಧಿ ಶಂಕರ ನಂದೇಶ್ವರ ಅವರನ್ನು ಡಿಸಿಸಿ ಬ್ಯಾಂಕ್ನ ಅಥಣಿ ಶಾಖೆಯಿಂದ ಬೆಳಗಾವಿ ಶಾಖೆಗೆ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆ ನಾನೇ ಮಾಡಿಸಿದ್ದೇನೆ ಎಂಬ ಕೋಪ ಅವರಲ್ಲಿತ್ತು. ಜತೆಗೆ, ಜಾರಕಿಹೊಳಿ ಕುಟುಂಬದೊಂದಿಗೆ ನಾನು ಉತ್ತಮ ಸಂಬಂಧ ಹೊಂದಿರುವೆ. ಹಾಗಾಗಿ ನನ್ನ ಮೇಲೆ ಹಲ್ಲೆ ಮಾಡಿರುವ ಅನುಮಾನವಿದೆ. ನನ್ನ ಜೀವಕ್ಕೆ ಹಾನಿಯಾದರೆ, ಲಕ್ಷ್ಮಣ ಸವದಿ ಅವರೇ ಹೊಣೆ’ ಎಂದು ಹೇಳಿದ್ದಾರೆ.
ಗಾಯಗೊಂಡ ನಿಂಗಪ್ಪ ಅವರಿಗೆ ಅಥಣಿ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯ ವಿವಿಧೆಡೆ ಡಿಸಿಸಿ ಬ್ಯಾಂಕ್ ಶಾಖೆಗಳನ್ನು ಬಂದ್ ಮಾಡಿ, ನಿಂಗರಾಜ ಮೇಲಿನ ಹಲ್ಲೆಯನ್ನು ಸಿಬ್ಬಂದಿ ಖಂಡಿಸಿದರು. ‘ಹಲ್ಲೆ ಮಾಡಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೆ ಬ್ಯಾಂಕ್ ಬಂದ್ ಮಾಡಿ, ಹಲ್ಲೆ ಮಾಡಿದ ಆರೋಪಿಗಳ ಮನೆ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು’ ಎಂದು ಎಚ್ಚರಿಕೆ ಕೊಟ್ಟರು.
ಹಲ್ಲೆಗೂ, ನಮಗೂ ಸಂಬಂಧವಿಲ್ಲ: ಸವದಿ
‘ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದಲ್ಲಿ ಸಮಸ್ಯೆಗಳಿವೆ. ಹಾಗಾಗಿ ಕೆಲ ನೌಕರರು ಚರ್ಚೆಗಾಗಿ ನನ್ನ ನಿವಾಸಕ್ಕೆ ಬಂದಿದ್ದರು. ಸಂಘದ ಅಧ್ಯಕ್ಷ ನಿಂಗಪ್ಪ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ನೌಕರರು ದೂರಿದರು. ಆಗ ಈ ವಿಷಯ ನನ್ನ ಬಳಿ ಚರ್ಚಿಸಬೇಡಿ. ನೀವೇ ಹೊರಗೆ ಬಗೆಹರಿಸಿಕೊಳ್ಳಿ ಎಂದೆ. ಅವರು ಹೊರಹೋಗುತ್ತಿದ್ದಂತೆ ನನ್ನ ಬೆಂಬಲಿಗ ಶ್ರೀಕಾಂತ ಅಲಗೂರ, ಈ ವಿಚಾರ ಶಾಸಕರ ಬಳಿ ಎಕೆ ತಂದಿದ್ದೀರಿ ಎಂದು ಪ್ರಶ್ನಿಸಿದರು. ಆಗ ನಿಂಗಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿದಾಗ ತಳ್ಳಾಟ, ನೂಕಾಟವಾಗಿದೆ’ ಎಂದು ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದರು.
‘ಜಗಳ ಮಾಡುವುದಾದರೆ, ನಮ್ಮ ಮನೆಯಿಂದ ಹೊರನಡೆಯಿರಿ ಎಂದು ನಾನು ಹೇಳಿದೆ. ಈ ಹಲ್ಲೆಗೂ, ನಮಗೂ ಸಂಬಂಧವಿಲ್ಲ. ಯಾರೋ ರಾಜಕೀಯ ಮುಖಂಡರು ಮಾಡಿಸಿದ ಗಲಾಟೆ ಇದಾಗಿದೆ. ರಾಜಕಾರಣದಲ್ಲಿ ಇದೆಲ್ಲ ಸ್ವಾಭಾವಿಕ. ಇದರ ಹಿಂದೆ ಒಂದು ಸಂಚು ರೂಪಿಸಲಾಗಿದೆ. ತನಿಖೆ ನಂತರ ಎಲ್ಲವೂ ಹೊರಬರುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.