ADVERTISEMENT

ಸಂಚಾರ ನಿಯಮ ಪಾಲಿಸಿ, ಅಪಘಾತ ತಪ್ಪಿಸಿ :ಸಂಜಯ ಪಾಟೀಲ

ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 10:47 IST
Last Updated 21 ಜನವರಿ 2020, 10:47 IST

ಬೆಳಗಾವಿ: ‘ಯುವಕರು ಪ್ಯಾಷನ್ ಲೋಕದಲ್ಲಿ ಮಗ್ನರಾಗಿ ವಾಹನವನ್ನು ವೇಗವಾಗಿ ಚಲಾಯಿಸಿ ಪ್ರಾಣಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ. ಶಿಸ್ತು, ಸೌಮ್ಯಭಾವ ಅಳವಸಿಡಿಕೊಂಡರೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸಿದರೆ ಅಪಘಾತಗಳನ್ನು ತಪ್ಪಿಸಬಹುದು’ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.

ಜಿಲ್ಲಾಡಳಿತ, ಸಾರಿಗೆ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯಿಂದ ಇಲ್ಲಿನ ಹಿಂದುವಾಡಿಯ ಗೋಮಟೇಶ ವಿದ್ಯಾಪೀಠ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಹಳಷ್ಟು ಮಂದಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸುತ್ತಾರೆಯೇ ಹೊರತು ನಿಮಯ ಪಾಲನೆ ಮಾಡುತ್ತಿಲ್ಲ. ಇದು ವಿಷಾದದ ಬೆಳವಣಿಗೆ’ ಎಂದರು.

ADVERTISEMENT

ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಮಾತನಾಡಿ, ‘ದ್ವಿಚಕ್ರವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಬೇರೆಯವರಿಗೂ ಬುದ್ಧಿ ಹೇಳಬೇಕು. ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಅನಾಹುತ ಖಚಿತ. ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು’ ಎಂದು ಕೋರಿದರು.

ಪ್ರಾಚಾರ್ಯ ಎಸ್.ಕೆ. ಕಟ್ಟಿ, ಉಪ ಪ್ರಾಚಾರ್ಯ ಡಿ.ಎಸ್. ಹನಗುಂಡಿ, ಎಸ್.ಕೆ. ಹುಗ್ಗಿ ಮಾತನಾಡಿದರು.

ಪಿ.ಎನ್. ಭಂಡಾರಿಮಠ ಸ್ವಾಗತಿಸಿದರು. ಸುಜಯ ಎಸ್. ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.