ADVERTISEMENT

ಬೆಳಗಾವಿ| ಮನರೇಗಾ ಬದಲಾವಣೆ: ಕೇಂದ್ರದ ವಿರುದ್ಧ ಹರಿಹಾಯ್ದ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 6:51 IST
Last Updated 21 ಜನವರಿ 2026, 6:51 IST
ಮನರೇಗಾ ಯೋಜನೆ ಸ್ವರೂಪ ಬದಲಿಸಿದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಬೆಳಗಾವಿ ತಾಲ್ಲೂಕಿನ ಕಡೋಲಿಯಲ್ಲಿ ಮಂಗಳವಾರ ಮಹಿಳೆಯರು ಪ್ರತಿಭಟನೆ ನಡೆಸಿದರು
ಮನರೇಗಾ ಯೋಜನೆ ಸ್ವರೂಪ ಬದಲಿಸಿದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಬೆಳಗಾವಿ ತಾಲ್ಲೂಕಿನ ಕಡೋಲಿಯಲ್ಲಿ ಮಂಗಳವಾರ ಮಹಿಳೆಯರು ಪ್ರತಿಭಟನೆ ನಡೆಸಿದರು   

ಬೆಳಗಾವಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿರುವ ಮೋದಿ ಸರ್ಕಾರ ಜನರ ಹಕ್ಕುಗಳನ್ನು ಕದಿಯುತ್ತಿದೆ ಎಂದು ಆರೋಪಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ, ಕಡೋಲಿ, ಮನಗುತ್ತಿ, ದಡ್ಡಿ ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಕೂಲಿ ಕಾರ್ಮಿಕರು, ಹಿರಿಯ ನಾಗರಿಕರು, ಮಹಿಳೆಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರನ್ನು ಕೈಬಿಟ್ಟಿರುವ ಕೇಂದ್ರ ಸರ್ಕಾರದ ಕ್ರಮ ಖಂಡನಾರ್ಹ ಎಂದು ಘೋಷಣೆ ಮೊಳಗಿಸಿದರು.

ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವ ಈ ಮಹತ್ವದ ಯೋಜನೆಗೆ ಯುಪಿಎ ಸರ್ಕಾರ ನೀಡಿದ ಹೆಸರನ್ನು ಅಳಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ. ಅಲ್ಲದೇ, ಆಯ್ಕೆ ಮಾಡಿದ ಹಳ್ಳಿಗಳಲ್ಲಿ ಮಾತ್ರ ಕೆಲಸ ಮಾಡಬೇಕಿದೆ. ಇದರಿಂದ ಬೇರೆ ಹಳ್ಳಿಗಳಲ್ಲಿ ಯಾವುದೇ ಕೆಲಸ ಮಾಡುವ ಆಗುವುದಿಲ್ಲ ಎಂದು ಸಮಸ್ಯೆ ತೋಡಿಕೊಂಡರು.

ADVERTISEMENT

ವಿಬಿ ಜಿ ರಾಮ್ ಜಿ ಯೋಜನೆ ಬಿಲ್‌ ರದ್ಧು ಮಾಡಿ, ಮನರೇಗಾ ಯೋಜನೆ ಜಾರಿಗೆಯಲ್ಲಿ ಇರುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಬಡವರ ಯೋಜನೆಗೆ ಯಾವುದೇ ಸರ್ಕಾರಗಳು ಕೈ ಹಾಕಬಾರದು. ಮನರೇಗಾ ಯೋಜನೆಯಿಂದ ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಸದೃಢರಾಗಿದ್ದಾರೆ. 100 ದಿನದ ಕೂಲಿ ಜೀವನಾಡಿಯಾಗಿದೆ. ಕೇಂದ್ರ ಪಾಲು ಶೇ 60 ಭಾಗ ರಾಜ್ಯ ಸರ್ಕಾರಗಳ ಶೇ 40 ಭಾಗ ಹಂಚಿಕೆ ಮಾಡಿದೆ. ಇಷ್ಟು ಮೊತ್ತದ ಹಣವನ್ನು ಹೊಂದಿಸಲು ಯಾವ ರಾಜ್ಯ ಸರ್ಕಾರಗಳಿಗೂ ಸಾಧ್ಯವಿಲ್ಲದ ಕಾರಣ ರಾಜ್ಯಗಳ ತೆರಿಗೆಯ ಬಹುಪಾಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ಭಾರ ಹಾಕಿದರೆ ದುಡಿಯುವ ಕೈಗಳಿಗೆ ಕೆಲಸ ಮತ್ತು ಕೂಲಿ ಸಿಗಲು ಸಾಧ್ಯವೇ ಇಲ್ಲ. ಇದನ್ನು ಹಿಂಪಡೆಯಬೇಕು ಎಂದೂ ಆಗ್ರಹಿಸಿದರು.

ಕಡೋಲಿ ಪಿಡಿಒ ಕೃಷ್ಣಾಬಾಯಿ ಬಂಡಾರಿ ಅವರಿಗೆ ಮನವಿ ಸಲ್ಲಿಸಿದರು. ಅನಿತಾ ಬೆಳಂಗಾವಕರ್, ವಂದನಾ ಕುಟ್ಟರೆ, ಪುಪ್ಪಾ ಮಜಗಾವಿ, ಅಶ್ವಿನಿ ಪಾಟೀಲ, ಪ್ರಭಾವತಿ ಬಿರ್ಜೆ, ಲಕ್ಷ್ಮಿ ಕುಟರೆ, ಪ್ರಭಾ ಗೌಡವೆ, ಅನಿತಾ ಪೌವಲೆ, ಲಕ್ಷ್ಮಿ ಪಾವಲೆ, ರೇಣುಕಾ ಗಾವಡೆ, ಶಾಂತಾ ಗಾವಡೆ, ನಿತಾ ಚೌಗಲೆ, ಮನಿಶಾ ಕಾಲೇಕರ್, ಮಾಲು ಮುತ್ತಗೇಕರ್, ಕವಿತಾ ಪಾಟೀಲ, ಶೋಭಾ ಪಾಟೀಲ, ಕಲ್ಪನಾ ನರೋಟಿ, ಲಕ್ಷ್ಮೀ ಅಂಕಿ, ಸುನೀತಾ ನಿರವಾಣಿ ಹಾಗೂ ಮಹಾದೇವಿ ಪಾಟೀಲ, ಲಕ್ಷ್ಮೀ ಬಾಳೆಕುಂದ್ರಿ, ರೇಣುಕಾ ಸದಾವರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.