ADVERTISEMENT

ಬೆಳಗಾವಿ: ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಸ ದಿಢೀರ್ ಮೊಟಕು, ಚರ್ಚೆಗೆ ಗ್ರಾಸ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 15:43 IST
Last Updated 30 ಮಾರ್ಚ್ 2021, 15:43 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಇಲ್ಲಿನ ಪ್ರವಾಸ ಮೊಟಕುಗೊಳಿಸಿ ದಿಢೀರನೆ ಬೆಂಗಳೂರಿನತ್ತ ತೆರಳಿದ್ದು ಚರ್ಚೆಗೆ ಗ್ರಾಸವಾಯಿತು.

ಪ್ರವಾಸ ಕಾರ್ಯಕ್ರಮದ ‍ಪ್ರಕಾರ ಅವರು ಇಲ್ಲೇ ತಂಗಿ, ಬುಧವಾರ (ಮಾರ್ಚ್‌ 31) ಬೆಳಿಗ್ಗೆ ಬೆಂಗಳೂರಿಗೆ ವಿಮಾನದಲ್ಲಿ ತೆರಳಬೇಕಿತ್ತು. ಆದರೆ, ಸಂಜೆಯೇ ಅವರು ರಸ್ತೆ ಮಾರ್ಗವಾಗಿ ಹುಬ್ಬಳ್ಳಿ ವಿಮಾನನಿಲ್ದಾಣಕ್ಕೆ ತೆರಳಿದರು.

ಇದಕ್ಕೂ ಮುನ್ನ ಅವರು ತಾವಿದ್ದ ಹೋಟೆಲ್‌ನಲ್ಲಿ, ಉಪ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಸಮಾಜಗಳ ಮುಖಂಡರ ಸಭೆ ನಡೆಸಿದರು.

ADVERTISEMENT

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನೇಕಾರ, ಕುರುಬ, ಮರಾಠಾ ಮೊದಲಾದ ಸಮಾಜಗಳ ಮುಖಂಡರ ಜೊತೆಗೆ ಸಭೆ ನಡೆಸಿದ್ದೇನೆ. ದಿವಂಗತ ಸುರೇಶ ಅಂಗಡಿ ಬಗ್ಗೆ ನಮಗೆ ಗೌರವವಿದೆ ಎಂದು ಎಲ್ಲರೂ ತಿಳಿಸಿದ್ದಾರೆ. ಪಕ್ಷದ ಅಭ್ಯರ್ಥಿ ಪರ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದೂ ಹೇಳಿದ್ದಾರೆ.ಏಪ್ರಿಲ್‌ 7ರಂದು ಮತ್ತೆ ಬೆಳಗಾವಿಗೆ ಬರುತ್ತೇನೆ’ ಎಂದು ತಿಳಿಸಿದರು.

‘ಲಿಂಗಾಯತ ಸಮುದಾಯ ಸದಾ ನಮ್ಮೊಂದಿಗಿದೆ. ಅವರು ನಮ್ಮ ಕೈ ಬಿಡುವುದಿಲ್ಲ. ನಾನೂ ಅವರೊಂದಿಗೆ ಇದ್ದೇನೆ’ ಎಂದರು.

‘ಸಿ.ಡಿ. ಪ್ರಕರಣದ ಯುವತಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ವಿಚಾರ ನನಗೆ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿಯಿಂದ ‘ಸಮಾಜ’ ಮತ ಬೇಟೆ
ಬೆಳಗಾವಿ:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಪ ಚುನಾವಣೆಯಲ್ಲಿ ಬಿಜೆಪಿ ಪರ ಮತ ಬೇಟೆಯ ಭಾಗವಾಗಿ ಮಂಗಳವಾರ ವಿವಿಧ ಸಮಾಜಗಳ ಮುಖಂಡರ ಸರಣಿ ಸಭೆಗಳನ್ನು ನಡೆಸಿ, ಅವರ ಮನವೊಲಿಸಲು ಪ್ರಯತ್ನಿಸಿದರು.

‘ಮರಾಠಾ ಸಮಾಜದ ಮುಖಂಡರು ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಷರತ್ತುಬದ್ಧ ಬೆಂಬಲಕ್ಕೆ ಸಮ್ಮತಿ ಸೂಚಿಸಿದರು. ಬೆಳಗಾವಿಯಲ್ಲಿ ಭಗವಾ ಧ್ವಜಕ್ಕೆ ಅವಮಾನ ಆಗದಂತೆ ನೋಡಿಕೊಳ್ಳಬೇಕು. ಮರಾಠಿ ಫಲಕಗಳಿಗೆ ರಕ್ಷಣೆ ಕೊಡಬೇಕು ಮತ್ತು ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ₹ 500 ಕೋಟಿ ಅನುದಾನ ಕಲ್ಪಿಸುವಂತೆ ಕೋರಿದರು’ ಎಂದು ಮೂಲಗಳು ತಿಳಿಸಿವೆ.

ಹಾಲುಮತ ಸಮಾಜದವರು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಹಾಗೂ ನೇಕಾರ ಸಮಾಜದವರು ವಿಶೇಷ ಪ್ಯಾಕೇಜ್‌ ನೀಡುವಂತೆ ಮನವಿ ಮಾಡಿದರು ಎಂದು ತಿಳಿದುಬಂದಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.