ADVERTISEMENT

ಬೆಳಗಾವಿ: ದ್ರಾಕ್ಷಿ ಬೆಳೆಗೆ ಹಾನಿ; ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 12:37 IST
Last Updated 19 ನವೆಂಬರ್ 2021, 12:37 IST
ತೆಲಸಂಗದಲ್ಲಿ ದ್ರಾಕ್ಷಿ ಬೆಳೆಯನ್ನು ತೋಟಗಾರಿಕೆ ಅಧಿಕಾರಿ ಅಕ್ಷಯಕುಮಾರ ಉಪಾಧ್ಯಾಯ ವೀಕ್ಷಿಸಿದರು
ತೆಲಸಂಗದಲ್ಲಿ ದ್ರಾಕ್ಷಿ ಬೆಳೆಯನ್ನು ತೋಟಗಾರಿಕೆ ಅಧಿಕಾರಿ ಅಕ್ಷಯಕುಮಾರ ಉಪಾಧ್ಯಾಯ ವೀಕ್ಷಿಸಿದರು   

ತೆಲಸಂಗ: ಈ ಭಾಗದಲ್ಲಿ ಐದು ದಿನಗಳಿಂದ ಮೋಡ ಕವಿದ ವಾತಾವರಣ ಇರುವುದು ಹಾಗೂ ತುಂತುರು ಮಳೆಯಿಂದಾಗಿ ಹಾನಿಯಾದ ದ್ರಾಕ್ಷಿ ಬೆಳೆಯನ್ನು ತೋಟಗಾರಿಕೆ ಅಧಿಕಾರಿ ಅಕ್ಷಯಕುಮಾರ ಉಪಾಧ್ಯಾಯ ಶುಕ್ರವಾರ ಭೇಟಿ ಪರೀಶೀಲನೆ ನಡೆಸಿದರು.

ಹೋಬಳಿಯ ತೆಲಸಂಗ, ಕನ್ನಾಳ, ಬನ್ನೂರ, ಕೊಟ್ಟಲಗಿ, ಕಕಮರಿ, ಹಾಲಳ್ಳಿ, ಫಡತರವಾಡಿ ಮೊದಲಾದ ಗ್ರಾಮಗಳಲ್ಲಿ ದ್ರಾಕ್ಷಿ ಬೆಳೆಯನ್ನು ವೀಕ್ಷಿಸಿದರು.

ನಂತರ ಮಾತನಾಡಿ, ‘ಸದ್ಯ ಹೂವು ಹಂತದಲ್ಲಿರುವ ದ್ರಾಕ್ಷಿ ಬೆಳೆಗೆ ಹಾನಿಯಾಗಿರುವುದು ಕಂಡುಬಂದಿದೆ. ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ರೈತ ಸುನೀಲ ಕಾಳೆ ಮಾತನಾಡಿ, ‘ಮಳೆ ಕೊರತೆಯಿಂದ ಈ ಭಾಗದಲ್ಲಿ ಬೆಳೆ ಕೈಗೆ ಬರಲಿಲ್ಲ. ಈಗ ಕೆಲವು ದಿನಗಳಿಂದ ಮಂಜು ಹಾಗೂ ಮೋಡದ ವಾತಾವರಣದಿಂದ ದ್ರಾಕ್ಷಿ ಬೆಳೆಗೆ ಡೌನಿ, ಕೊಳೆ ರೋಗ ಕಾಣಿಸಿಕೊಂಡಿದ್ದರಿಂದ ಪ್ರಸಕ್ತ ವರ್ಷವೂ ದ್ರಾಕ್ಷಿ ಹುಳಿಯಾಗಿದೆ. ಹೂ ಹಂತದಲ್ಲಿರುವ ದ್ರಾಕ್ಷಿಗೆ ಡೌನಿ ಮತ್ತು ಕೊಳೆ ರೋಗದಿಂದ ಗೊಂಚಲುಗಳಲ್ಲಿನ ಕಾಯಿಗಳು ಸುಟ್ಟು ಕರಕಲಾದಂತಾಗಿ ಉದರಿ ಬೀಳುತ್ತಿವೆ. ಚಿಕ್ಕಿ ರೋಗ ಹಾಗೂ ಎಲೆ ಹಳದಿ ಬಣ್ಣಕ್ಕೆ ತಿರಗುತ್ತಿವೆ. ಸದ್ಯದ ಸ್ಥಿತಿ ನೋಡಿದರೆ ಖರ್ಚು ಸಹ ಮರಳಿ ಬಾರದಂತಾಗಿದೆ’ ಎಂದು ತಿಳಿಸಿದರು.

‘ಕಾಯಿ ಚಾಟ್ನಿ ಮಾಡಿ 22ರಿಂದ 30 ದಿನಗಳು ಆಗಿವೆ. ಬೇಸಿಗೆಯಲ್ಲಿನ ಚಾಟ್ನಿ, ಕಡ್ಡಿ ತೆಯಾರಿಕೆ, ಗೊಬ್ಬರ, ಔಷಧಿ ಸೇರಿ ಎಕರೆಗೆ ₹ 1.5 ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ. ಸರ್ಕಾರ ರೈತರ ಕೈ ಹಿಡಿಯಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.