ಕೌಜಲಗಿ: ಸಮೀಪದ ರಡ್ಡೇರಟ್ಟಿ ಗ್ರಾಮದಲ್ಲಿ ದಸರಾ ಹಬ್ಬದ ಅಂಗವಾಗಿ ಸೋಮವಾರ ಕರಿಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ದೇವರ ನುಡಿಕಾರನಿಂದ ಭವಿಷ್ಯವಾಣಿ ನುಡಿಯಾಯಿತು. ಸಮಾಧಾನ ಸಮಾಧಾನ ಮಕ್ಕಳಿರಾ! ರೋಣಿ ಮಿರ್ಗಾ ಜೋಡಗುರ್ಗಿ! ಮಗಿ ಹುಬ್ಬಿ ಉತ್ರಿ ಹಸ್ತ ಮಳಿ ಮಕ್ಕಳಿರಾ! ವಾಹನ ಮ್ಯಾಗ ಅದ್ಯಾಡವ್ರು ಸಾವಕಾಶ ಅದ್ಯಾಡ್ರಿ ಮಕ್ಕಳಿರಾ! ಸೋಮವಾರ ಬಸವಣ್ಣನ ಹೂಡಬ್ಯಾಡ್ರಿ ಮಕ್ಕಳಿರಾ! ಎಂದು ಕರಿಸಿದ್ದೇಶ್ವರ ನುಡಿಕಾರ ನುಡಿಗಳನ್ನಾಡಿದರು.
ಗೋಕಾಕ ತಾಲ್ಲೂಕಿನ ಕೌಜಲಗಿ ಹೋಬಳಿಯ ರಡ್ಡೇರಟ್ಟಿ ಗ್ರಾಮದಲ್ಲಿ ಪ್ರತಿ ವರ್ಷ ದಸರಾ ಹಬ್ಬ ವಿಶೇಷವಾಗಿ ಆಚರಿಸಲಾಗುತ್ತದೆ. ನವರಾತ್ರಿಯ ನಿಮಿತ್ತ ಒಂಬತ್ತು ದಿನಗಳ ಕಾಲ ರಡ್ಡೇರಟ್ಟಿ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.
ದಸರೆಯ ಅಂಗವಾಗಿ ಪ್ರತಿ ವರ್ಷ ಇಲ್ಲಿ ಕರಿಸಿದ್ದೇಶ್ವರ ದೇವಸ್ಥಾನದ ನುಡಿಕಾರ ರೈತಾಪಿ ಜನಕ್ಕೆ, ಸಮಸ್ತ ಲೋಕಕ್ಕೆ ಹೇಳಿದ ನುಡಿಗಳ ಮೇಲೆ ಇಲ್ಲಿಯ ಭಕ್ತರ ಅಪಾರವಾದ ನಂಬಿಕೆ ಇದೆ.
ನುಡಿಗಳ ತಾತ್ಪರ್ಯ: ಈ ವರ್ಷ ಸಂಪೂರ್ಣ ಮಳೆಗಾಲವಿದೆ ಮೇಘ, ಹುಬ್ಬಿ, ಉತ್ತರೆ, ಹಸ್ತ ಮಳೆಗಳು ರೈತರ ವಿಶ್ವಾಸದ ಮಳೆಯಾಗಲಿವೆ ಎಂದು ಗ್ರಾಮದ ಹಿರಿಯರು ಪರಸ್ಪರ ನುಡಿಕಾರನ ನುಡಿಗಳನ್ನು ಅರ್ಥೈಸಿಕೊಂಡರು. ರಡ್ಡೇರಟ್ಟಿ ಶ್ರೀ ಕರಿಸಿದ್ದೇಶ್ವರ ಜಾತ್ರಾ ಕಮಿಟಿಯ ವ್ಯವಸ್ಥಾಪಕರಾದ ಪತ್ರೆಪ್ಪ ಬಿಸಗುಪ್ಪಿ, ಭೀಮಶೆಪ್ಪ ಗೂಬೀರಣ್ಣವರ ಸೇರಿದಂತೆ ದೇವಸ್ಥಾನ ಟ್ರಸ್ಟ್ ಕಮಿಟಿಯ ಸರ್ವ ಸದಸ್ಯರು, ಗ್ರಾಮದ ಮುಖಂಡರು, ಹಿರಿಯರು ಮಹಿಳೆಯರು, ಯುವಕರು, ಮಕ್ಕಳು ಹಾಗೂ ಕೌಜಲಗಿ, ರಡ್ಡೇರಟ್ಟಿ, ಸುತ್ತಲಿನ ಸುಮಾರು 40ಕ್ಕೂ ಹೆಚ್ಚು ಗ್ರಾಮಗಳ ಕರಿಸಿದ್ದೇಶ್ವರ ಭಕ್ತರು ದಸರಾ ನುಡಿಗಳನ್ನು ಆಲಿಸಿದರು. ಕರಿಸಿದ್ದೇಶ್ವರ ಜಾತ್ರೆ ಭಂಡಾರಮಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.